ಸಾರಾಂಶ
ಮಂತ್ರಾಲಯ ಪ್ರವಾಸಕ್ಕೆ ತೆರಳುತ್ತಿದ್ದ ಕಾರು ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಮದ್ದೂರು ತಾಲೂಕಿ ಕೊಪ್ಪ ಗ್ರಾಮದ ಜೆಡಿಎಸ್ ಮುಖಂಡ ಸ್ಥಳದಲ್ಲೇ ಮೃತಪಟ್ಟು, ಕಾರು ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ನಿಟ್ಟೂರಿನ ಬಳಿ ಸೋಮವಾರ ಮುಂಜಾನೆ ಜರುಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಮಂತ್ರಾಲಯ ಪ್ರವಾಸಕ್ಕೆ ತೆರಳುತ್ತಿದ್ದ ಕಾರು ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ತಾಲೂಕಿ ಕೊಪ್ಪ ಗ್ರಾಮದ ಜೆಡಿಎಸ್ ಮುಖಂಡ ಸ್ಥಳದಲ್ಲೇ ಮೃತಪಟ್ಟು, ಕಾರು ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ನಿಟ್ಟೂರಿನ ಬಳಿ ಸೋಮವಾರ ಮುಂಜಾನೆ ಜರುಗಿದೆ.ಕೊಪ್ಪ ಗ್ರಾಮದ ಶಶಿಧರ್ (50) ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಮತ್ತೋರ್ವ ಜೆಡಿಎಸ್ ಮುಖಂಡ ಗಿರಿ ಹಾಗೂ ಹಿಂಭಾಗದ ಸೀಟಿನಲ್ಲಿ ರಘು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಪಂ ಚುನಾವಣೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಗಿರಿ ಕೊಪ್ಪ ಗ್ರಾಮ ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರನ್ನು ಮೂರು ಬಸ್ ಹಾಗೂ ಎರಡು ಕಾರುಗಳಲ್ಲಿ ಮಂತ್ರಾಲಯ ಪ್ರವಾಸಕ್ಕೆ ತೆರಳುತ್ತಿದ್ದರು. ಈ ಪೈಕಿ ಗಿರಿ ಪ್ರಯಾಣಿಸುತ್ತಿದ್ದ ಕಾರು ನಿಟ್ಟೂರಿನ ಬಳಿ ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಶಶಿಧರ್ ಸ್ಥಳದಲ್ಲಿ ಮೃತಪಟ್ಟು, ಗಿರಿ ಮತ್ತು ರಘು ಗಾಯಗೊಂಡಿದ್ದಾರೆ.ನಿಟ್ಟೂರು ಆಸ್ಪತ್ರೆಯಲ್ಲಿ ಮೃತ ಶಶಿಧರ್ ಶವದ ಮರಣೋತ್ತರ ಪರೀಕ್ಷೆ ನಂತರ ಶವವನ್ನು ಸ್ವಗ್ರಾಮ ಕೊಪ್ಪಗೆ ತಂದು ಅಂತ್ಯಕ್ರಿಯ ನಡೆಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್ ಸೇರಿದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಮೃತರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.