ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಾಲಬಾಧೆ ತಾಳಲಾರದೇ ಯುವ ರೈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.ಗ್ರಾಮದ ರಾಜು ಅವರ ಪುತ್ರ ಯುವ ರೈತ ಟಿ.ಆರ್.ಚೇತನ್ ಗೌಡ (25) ಆತ್ಮಹತ್ಯೆ ಮಾಡಿಕೊಂಡವನು. ತಂದೆ ಅನಾರೋಗ್ಯದಿಂದ ಕಳೆದ ಎರಡು ವರ್ಷಗಳಿಂದ ವ್ಯವಸಾಯದಲ್ಲಿ ತೊಡಗಿದ್ದ ಚೇತನ್ ಗೌಡ ಗ್ರಾಮ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ತಂದೆಯ ಹೆಸರಿನಲ್ಲಿ 1.40 ಲಕ್ಷ ರು. ಬೆಳೆ ಸಾಲ ಹಾಗೂ ಖಾಸಗಿ ಫೈನಾನ್ಸ್ ಸೇರಿದಂತೆ ವಿವಿಧೆಡೆ 5 ಲಕ್ಷ ರು.ನಷ್ಟು ಸಾಲ ಮಾಡಿದ್ದರು.
ಹೈನುಗಾರಿಕೆ, ರೇಷ್ಮೆ ಸಾಕಾಣಿಕೆ, ಹಂದಿ ಸಾಕಾಣಿಕೆಯ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ವ್ಯವಸಾಯದಲ್ಲಿ ಸಾಕಷ್ಟು ನಷ್ಟದಿಂದ ನೊಂದಿದ್ದ ಅವರು ಭಾನುವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಪತ್ನಿ ಎಂ.ಡಿ.ಸಂಜನಾ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಾಲುವೆಗೆ ಬಿದ್ದು ವ್ಯಕ್ತಿ ಸಾವುಶ್ರೀರಂಗಪಟ್ಟಣ:
ನಾಲಾ ದಡದಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದ ಯುವಕ ಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ನಗುವನಹಳ್ಳಿ ಗ್ರಾಮದ ಬಳಿಯ ವಿರಿಜಾ ನಾಲೆಯಲ್ಲಿ ಸಂಭವಿಸಿದೆ.
ನಗುವನಹಳ್ಳಿ ಕಾಲೋನಿ ನಿವಾಸಿ ಚರಣ್ (35) ಸಾವನ್ನಪ್ಪಿರುವ ವ್ಯಕ್ತಿ ಎಂದು ತಿಳಿದು ಬಂದಿದೆ. ಈತ ತನ್ನ ಸ್ನೇಹಿತ ಪವನ್ ನೊಂದಿಗೆ ಭಾನುವಾರ ರಾತ್ರಿ ಮಧ್ಯಪಾನ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಚರಣ್ ಕಾಲುವೆಗೆ ಬಿದ್ದು ನೀರಿಗೆ ಮುಳುಗಿ ಸಾವನ್ನಪ್ಪಿದ್ದು, ಸೋಮವಾರ ಬೆಳಗ್ಗೆ ಶವ ಪತ್ತೆಯಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.