ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಚ್ಎಸ್ಆರ್ ಲೇಔಟ್ನ ಎರಡನೇ ಸೆಕ್ಟರ್ ಮನೆಯೊಂದರ ಸ್ನಾನದ ಕೋಣೆಯಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಆಂಧ್ರಪ್ರದೇಶ ಮೂಲದ ವೆಂಕಟರಮಣ ನಾಯಕ್ (35) ಮೃತರು. ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ. ಮೃತ ವೆಂಕಟರಮಣ ನಾಯಕ್ ಮತ್ತು ಆತನ ಪತ್ನಿ ನಂದಿನಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ.
ಎಚ್ಎಸ್ಆರ್ ಲೇಔಟ್ನ ಎರಡನೇ ಸೆಕ್ಟರ್ನ ಮನೆಯೊಂದರಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅದೇ ಮನೆ ಮಾಲೀಕರ ಕಟ್ಟಡದ ಕೆಳಭಾಗದಲ್ಲಿರುವ ಮನೆಯಲ್ಲಿ ದಂಪತಿ ನೆಲೆಸಿದ್ದಾರೆ.
ವೆಂಕಟರಮಣ ನಾಯಕ್ ಬೆಳಗ್ಗೆ ಗೃಹೋಪಯೋಗಿ ಶೋ ರೂಮ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ರಾತ್ರಿ ವೇಳೆ ತಾನು ಇರುವ ಮನೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ.
ಬುಧವಾರ ಬೆಳಗ್ಗೆ ಸ್ನಾನಕ್ಕೆ ಹೋದಾಗ ಸ್ನಾನದ ಕೋಣೆಯಲ್ಲಿ ವೆಂಕಟರಮಣ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪತ್ನಿ ನಂದಿನಿ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ಮಾಡಿದಾಗ ಮೇಲ್ನೋಟಕ್ಕೆ ಆಕಸ್ಮಿಕ ಸಾವಿನಂತೆ ಕಂಡಿದೆ.
ಪ್ರಾಥಮಿಕ ತನಿಖೆ ವೇಳೆ ವೆಂಟಕರಮಣನದು ಆಕಸ್ಮಿಕ ಸಾವಲ್ಲ. ಬದಲಾಗಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮೃತನ ಪತ್ನಿ ನಂದಿನಿ ಮೊಬೈಲ್ಗೆ ಒಂದೇ ಮೊಬೈಲ್ ಸಂಖ್ಯೆಯಿಂದ ಹಲವು ಬಾರಿ ಕರೆ ಬಂದಿರುವುದು ಅನುಮಾನಕ್ಕೆ ಎಡೆಮಾಡಿದೆ.
ಈ ಹಿನ್ನೆಲೆಯಲ್ಲಿ ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.