ಮಾಲೀಕರು ಕೆಲಸದಿಂದ ತೆಗೆದು ಹಾಕಲು ನೀವೇ ಕಾರಣ ಎಂದು ಕುಡಿದು ಗಲಾಟೆ : ಕತ್ತು ಹಿಸುಕಿ ಬಿಹಾರದವನ ಕೊಲೆ

| Published : Oct 05 2024, 01:38 AM IST / Updated: Oct 05 2024, 04:54 AM IST

murder

ಸಾರಾಂಶ

ಮಾಲೀಕರು ಕೆಲಸದಿಂದ ತೆಗೆದು ಹಾಕಲು ನೀವೇ ಕಾರಣ ಎಂದು ಮದ್ಯ ಸೇವಿಸಿ ಅಂಗಡಿ ಬಳಿ ಬಂದು ಗಲಾಟೆ ಮಾಡುತ್ತಿದ್ದ ಯುವಕನ ಮೇಲೆ ಆತನ ಸ್ನೇಹಿತರಿಬ್ಬರು ಹಲ್ಲೆಗೈದು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮೈಕೋ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಮಾಲೀಕರು ಕೆಲಸದಿಂದ ತೆಗೆದು ಹಾಕಲು ನೀವೇ ಕಾರಣ ಎಂದು ಮದ್ಯ ಸೇವಿಸಿ ಅಂಗಡಿ ಬಳಿ ಬಂದು ಗಲಾಟೆ ಮಾಡುತ್ತಿದ್ದ ಯುವಕನ ಮೇಲೆ ಆತನ ಸ್ನೇಹಿತರಿಬ್ಬರು ಹಲ್ಲೆಗೈದು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮೈಕೋ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಿಹಾರ ಮೂಲದ ಸುಜೀತ್(22) ಕೊಲೆಯಾದ ದುರ್ದೈವಿ.ಕೊಲೆಗೈದ ಆರೋಪದಡಿ ಆತನ ಸ್ನೇಹಿತರಾದ ಸಂಜಯ್(24) ಮತ್ತು ಅವಾನ್(24) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳು ಅ.3ರಂದು ರಾತ್ರಿ ತಮ್ಮ ಸ್ನೇಹಿತ ಸುಜೀತ್ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಹತ್ಯೆಗೈದು ಪರಾರಿಯಾಗಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಏನಿದು ಘಟನೆ?

3 ವರ್ಷಗಳ ಹಿಂದೆ ಉದ್ಯೋಗ ಅರಸಿ ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ ಸುಜೀತ್ ಹಾಗೂ ಇಬ್ಬರು ಆರೋಪಿಗಳು, ಬಿಳೇಕಹಳ್ಳಿಯಲ್ಲಿರುವ ಫ್ಲೈವುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಅಂಗಡಿಯಲ್ಲೇ ಮಲಗುತ್ತಿದ್ದರು. ಮದ್ಯ ವ್ಯಸನಕ್ಕೆ ಬಿದ್ದಿದ್ದ ಸುಜೀತ್ ಸರಿಯಾಗಿ ಕೆಲಸ ಮಾಡಿಸುತ್ತಿರಲಿಲ್ಲ. ಈ ವಿಚಾರಕ್ಕೆ ಮೂವರು ಸ್ನೇಹಿತರ ನಡುವೆ ಜಗಳವಾಗಿತ್ತು. ಈ ನಡುವೆ ಮಾಲೀಕರು ಸುಜೀತ್‌ನನ್ನು ಕೆಲಸದಿಂದ ತೆಗೆದಿದ್ದರು.

ಮದ್ಯ ಸೇವಿಸಿ ಅಂಗಡಿ ಬಳಿ ಬಂದು ಗಲಾಟೆ:ಕೆಲಸದಿಂದ ತೆಗೆದ ಬಳಿಕ ಬೇರೆಡೆ ನೆಲೆಸಿದ್ದ ಸುಜೀತ್‌, ಮದ್ಯ ಸೇವಿಸಿ ಆಗಾಗ ಫ್ಲೈವುಡ್‌ ಅಂಗಡಿ ಬಳಿ ಬಂದು ಮಾಲೀಕರು ಕೆಲಸದಿಂದ ತೆಗೆಯಲು ನೀವೇ ಕಾರಣ ಎಂದು ಆರೋಪಿಗಳ ಜತೆಗೆ ಜಗಳ ಮಾಡುತ್ತಿದ್ದ. ಅದರಂತೆ ಗುರುವಾರ ರಾತ್ರಿ ಸುಮಾರು 8 ಗಂಟೆಗೆ ಮದ್ಯ ಸೇವಿಸಿ ಫ್ಲೈವುಡ್‌ ಅಂಗಡಿ ಬಳಿ ಬಂದಿರುವ ಸುಜೀತ್‌, ಆರೋಪಿಗಳ ಜತೆಗೆ ಜಗಳ ಮಾಡಿದ್ದದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಆರೋಪಿಗಳು ಸುಜೀತ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಆತನ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಹೆದರಿ ಸ್ಥಳದಿಂದ ಪಾರಾರಿಯಾಗಿದ್ದಾರೆ.

ಕೆಲವೇ ತಾಸಿನಲ್ಲಿ ಆರೋಪಿಗಳ ಬಂಧನ:

ಕೆಲ ಸಮಯದ ಬಳಿಕ ಇತರೆ ಕಾರ್ಮಿಕರು ಅಂಗಡಿ ಬಳಿ ಬಂದಾಗ, ಸುಜೀತ್ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಮಾಲೀಕರಿಗೆ ಸುದ್ದಿ ತಿಳಿಸಿದ್ದಾರೆ. ಮಾಲೀಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಂತೆಯೆ ಘಟನೆ ಬಗ್ಗೆ ಮಾಹಿತಿ ಪಡೆದು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸುಜೀತ್‌ ಕೊಲೆ ಬಗ್ಗೆ ಬಿಹಾರದಲ್ಲಿರುವ ಆತನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಈ ಸಂಬಂಧ ಮೈಕೋ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.