ಮುಂಬೈ ಬಿಎಂಡಬ್ಲ್ಯು ಅಪಘಾತ: ಆರೋಪಿ ಮಿಹಿರ್‌ ಬಂಧನ

| Published : Jul 10 2024, 12:36 AM IST

ಸಾರಾಂಶ

ಮುಂಬೈನ ವರ್ಲಿಯಲ್ಲಿ ಬಿಎಂಡಬ್ಲ್ಯು ಕಾರು ಗುದ್ದಿ, ಮಹಿಳೆ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿ ಮಿಹಿರ್‌ ಶಾ (24)ನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮುಂಬೈ: ಮುಂಬೈನ ವರ್ಲಿಯಲ್ಲಿ ಬಿಎಂಡಬ್ಲ್ಯು ಕಾರು ಗುದ್ದಿ, ಮಹಿಳೆ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿ ಮಿಹಿರ್‌ ಶಾ (24)ನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಘಟನೆ ನಡೆದು ಮೂರು ದಿನಗಳ ಬಳಿಕ ಆರೋಪಿಯ ಬಂಧನವಾಗಿದೆ. ಮುಂಬೈನಿಂದ 65 ಕಿಮೀ ದೂರದಲ್ಲಿರುವ ವಿರಾರ್ ಅಪಾರ್ಟ್‌ಮೆಂಟ್‌ನಲ್ಲಿ ಮಿಹಿರ್‌ನನ್ನು ವಶಕ್ಕೆ ಪಡೆಯಲಾಯಿತು. ಇದೇ ವೇಳೆ ಮಿಹಿರ್‌ಗೆ ನೆರವು ನೀಡಿದ್ದಕ್ಕೆ ಸಂಬಂಧಿಸಿದಂತೆ ಆತನ ತಾಯಿ, ಸಹೋದರಿ ಸೇರಿದಂತೆ ಒಟ್ಟು 12 ಜನರನ್ನು ವಶಕ್ಕೆ ಪಡೆದಿದ್ದಾರೆ. ಮಿಹಿರ್ ಶಾ, ಮಹಾರಾಷ್ಟ್ರದ ಶಿವಸೇನೆಯ ಶಿಂಧೆ ಬಣದ ನಾಯಕ ರಾಜೇಶ್ ಶಾ ಪುತ್ರ. ಅಪಘಾತ ನಡೆದ ಬಳಿಕ , ಮಗ ನಾಪತ್ತೆಯಾದ ಬೆನ್ನಲ್ಲೇ ಭಾನುವಾರ ತಂದೆಯನ್ನು ಬಂಧಿಸಲಾಗಿತ್ತು. ಬಳಿಕ ಸೋಮವಾರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ಖಲಿಸ್ತಾನಿ ಉಗ್ರ ಪನ್ನೂನ್‌ ಸ್ಥಾಪಿಸಿದ್ದ ಎಸ್‌ಎಫ್‌ಜೆ ನಿಷೇಧ 5 ವರ್ಷ ವಿಸ್ತರಣೆನವದೆಹಲಿ: ಅಮೆರಿಕದಲ್ಲಿ ನೆಲೆಸಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಸ್ಥಾಪಿಸಿದ್ದ ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಸಂಘಟನೆ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಮತ್ತೆ ಐದು ವರ್ಷದ ವರೆಗೆ ವಿಸ್ತರಿಸಿದೆ. ಸಂಘಟನೆ ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ. ಇತ್ತೀಚೆಗೆ ಅಮೆರಿಕದಲ್ಲಿ ಪನ್ನೂನ್‌ ಹತ್ಯೆಗೆ ಸಂಚು ನಡೆದಿತ್ತು. ಇದರಲ್ಲಿ ಭಾರತ ಸರ್ಕಾರದ ಕೈವಾಡದ ಕುರಿತು ಅಮೆರಿಕ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ವರದಿಗಳು ಹೇಳಿದ್ದವು. ಆದರೆ ಈ ಆರೋಪವನ್ನು ಭಾರತ ತಳ್ಳಿಹಾಕಿತ್ತು.