ಸಾರಾಂಶ
ಖಾಸಗಿ ಶಾಲೆ ಶಿಕ್ಷಕಿಯನ್ನು ಕೊಲೆ ಮಾಡಿ ಮಣ್ಣಿನ ಹೂತಿದ್ದ ಮಾದರಿಯಲ್ಲಿ ಮೃತದೇಹ ಪತ್ತೆಯಾಗಿರುವ ಘಟನೆ ಯೋಗಾನರಸಿಂಹಸ್ವಾಮಿ ಬೆಟ್ಟದ ಹಿಂಭಾಗ ಸಿಡಿಲು ಕಲ್ಲುಮಂಟಿ ಬಳಿ ಸೋಮವಾರ ಪತ್ತೆಯಾಗಿದೆ.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಖಾಸಗಿ ಶಾಲೆ ಶಿಕ್ಷಕಿಯನ್ನು ಕೊಲೆ ಮಾಡಿ ಮಣ್ಣಿನ ಹೂತಿದ್ದ ಮಾದರಿಯಲ್ಲಿ ಮೃತದೇಹ ಪತ್ತೆಯಾಗಿರುವ ಘಟನೆ ಯೋಗಾನರಸಿಂಹಸ್ವಾಮಿ ಬೆಟ್ಟದ ಹಿಂಭಾಗ ಸಿಡಿಲು ಕಲ್ಲುಮಂಟಿ ಬಳಿ ಸೋಮವಾರ ಪತ್ತೆಯಾಗಿದೆ.
ಮಾಣಿಕ್ಯನಹಳ್ಳಿಯ ವೆಂಕಟೇಶ್ ಅವರ ಪುತ್ರಿ ದೀಪಿಕಾ (28) ಕೊಲೆಯಾದವರು. ಅದೇ ಗ್ರಾಮದ ಲೋಕೇಶ್ ಎಂಬಾತನನ್ನು ದೀಪಿಕಾ ಮದುವೆಯಾಗಿದ್ದಳು. ಇವರಿಗೆ 8 ವರ್ಷದ ಮಗು ಸಹ ಇದೆ.
ಮೇಲುಕೋಟೆ ಎಸ್ ಇಟಿ ಪಬ್ಲಿಕ್ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ದೀಪಿಕಾ ಪ್ರತಿದಿನ ತಮ್ಮ ಡಿಯೋ ಬೈಕ್ ಮೂಲಕ ಶಾಲೆಗೆ ಬಂದು ಹೋಗುತ್ತಿದ್ದರು. ಶನಿವಾರ ಶಾಲಾ ಕರ್ತವ್ಯ ಮುಗಿಸಿದ ಮಧ್ಯಾಹ್ನ 12 ಗಂಟೆಯ ವೇಳೆಗೆ ಯಾವುದೋ ಪೋನ್ಕಾಲ್ ಬಂದ ಕಾರಣ ಬೈಕ್ ಮೂಲಕ ತೆರಳಿದ್ದಾರೆ.
ಶನಿವಾರ ಯಾರದೋ ಬೈಕ್ ಬಹಳ ಹೊತ್ತಿನಿಂದ ಯೋಗಾನರಸಿಂಹಸ್ವಾಮಿ ಬೆಟ್ಟದ ಹಿಂಭಾಗ ನಿಂತಿರುವ ಬಗ್ಗೆ ಮಾಹಿತಿ ಬಂದಾಗ ಮೇಲುಕೋಟೆ ಪೊಲೀಸರು ಸ್ಥಳಕ್ಕೆ ತೆರಳಿ ಬೈಕ್ ವಶಕ್ಕೆ ಪಡೆದು ಸುತ್ತಮುತ್ತ ಹುಡುಕಿದ್ದಾರೆ ಯಾರೂ ಪತ್ತೆಯಾಗದ ಕಾರಣ ಬೈಕ್ ನಂಬರ್ ಆಧರಿಸಿ ಶಿಕ್ಷಕಿ ತಂದೆ ವೆಂಕಟೇಶ್ ಅವರನ್ನು ಕರೆಸಿ ಮಾಹಿತಿ ನೀಡಿದ್ದರು.
ಬೈಕ್ ತಮ್ಮ ಮಗಳದೇ ಎಂದು ಖಚಿತ ಪಡಿಸಿದ ವೆಂಕಟೇಶ್ ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ಮೇಲುಕೋಟೆ ಠಾಣೆಯಲ್ಲಿ ದೂರು ನೀಡಿದರು.
ಸೋಮವಾರ ಮಧ್ಯಾಹ್ನ ಸಾರ್ವಜನಿಕರು ಮಣ್ಣುನೊಳಗೆ ಮಹಿಳೆ ಶವವಿರುವುದನ್ನು ತಿಳಿಸಿದಾಗ ಕಾಣೆಯಾದ ದೀಪಿಕಾಳದೇ ಮೃತದೇಹ ಎಂಬುದು ಖಚಿತವಾಗಿದೆ. ಶಿಕ್ಷಕಿ ದೀಪಿಕಾ ಹೆಚ್ಚಾಗಿ ಟಿಕ್ ಟಾಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳುತ್ತಿದ್ದು ಈಕೆಯೆ ವಿಡಿಯೋಗಳು ಇಂದು ವಾಟ್ಸ್ಪ್ ಮೂಲಕ ಹರಿದಾಡುತ್ತಿದೆ.
ದೀಪಿಕಾ ಮೃತದೇಹವನ್ನು ಮಣ್ಣಿನಿಂದ ತೆಗೆದ ಪೊಲೀಸರು ಪಂಚೆನಾಮೆಗಾಗಿ ಪಾಂಡವಪುರಕ್ಕೆ ಕಳುಹಿಸಿದ್ದಾರೆ. ಶಿಕ್ಷಕಿ ದೀಪಿಕಾರನ್ನು ಕೊಲೆ ಮಾಡಲಾಗಿದೆ. ಈಕೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆಯೇ ಎಂಬುದರ ಬಗ್ಗೆ ತನಿಖೆಯಿಂದ ಪತ್ತೆಯಾಗಬೇಕಿದೆ.
ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿಷಯ ತಿಳಿದು ಎಸ್ಪಿ ಯತೀಶ್, ಶ್ರೀರಂಗಪಟ್ಟಣ ಡಿವೈಎಸ್ಪಿ ಮುರುಳಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು.