ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ದೇವಾಲಯದ ಬಾಗಿಲ ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು ಎರಡು ಗೋಲಕಗಳನ್ನು ಒಡೆದು ಹಣ ದೋಚಿರುವ ಘಟನೆ ತಾಲೂಕಿನ ಸಾತನೂರು ಬೆಟ್ಟದ ಶ್ರೀಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ನಡೆದಿದೆ.
ದೇವಾಲಯದ ಮುಂಬಾಗಿಲ ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು, ದೇವಾಲಯದ ಒಳಾವರಣದಲ್ಲಿದ್ದ ಎರಡು ಗೋಲಕಗಳನ್ನು ಮುರಿದು ಅದರಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಎರಡೂ ಗೋಲಕಗಳನ್ನು ದೇವಾಲಯದ ಹಿಂಭಾಗದಲ್ಲಿರುವ ಟ್ಯಾಂಕ್ ಬಳಿ ಬಿಸಾಡಿ ಪರಾರಿಯಾಗಿದ್ದಾರೆ.
ದೇವಾಲಯದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ದಾಖಲಾಗಿದ್ದ ಡಿವಿಆರ್ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ ಎಂಟತ್ತು ದಿನಗಳ ಹಿಂದೆಯಷ್ಟೇ ದೇವಾಲಯದಲ್ಲಿದ್ದ ಗೋಲಕಗಳ ಬೀಗ ತೆಗೆದ ಆಡಳಿತ ಮಂಡಳಿ ಅದರಲ್ಲಿದ್ದ ಹಣವನ್ನು ತೆಗೆದು ದೇವಾಲಯದ ಖಾತೆಗೆ ಹಣವನ್ನು ಹಾಕಿತ್ತು. ಹಾಗಾಗಿ ಹೆಚ್ಚಿನ ಹಣ ಸಿಕ್ಕಿಲ್ಲ ಎಂದು ಹೇಳಲಾಗಿದೆ.
ಕಳೆದ ಕೆಲ ದಿನಗಳ ಹಿಂದೆಯೂ ಕಳ್ಳತನಕ್ಕೆ ವಿಫಲ ಯತ್ನ ನಡೆದಿತ್ತು ಎನ್ನಲಾಗಿದ್ದು, ದುಷ್ಕರ್ಮಿಗಳು ಮಂಕಿ ಕ್ಯಾಪ್, ಮಾಸ್ಕ್ ಧರಿಸಿ ಗುರುತು ಪತ್ತೆಯಾಗದಂತೆ ಎಚ್ಚರ ವಹಿಸಿರುವುದೂ ಕಂಡುಬಂದಿದೆ.ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.