ಜೈಲಲ್ಲಿ ಕೈದಿಗಳ ಮದ್ಯ ಪಾರ್ಟಿ, ಡಾನ್ಸ್‌!

| N/A | Published : Nov 10 2025, 01:15 AM IST / Updated: Nov 10 2025, 05:20 AM IST

parappana agrahara jail scandal bengaluru vip inmates

ಸಾರಾಂಶ

ಶಂಕಿತ ಐಸಿಸ್‌ ಉಗ್ರ ಶಕೀಲ್‌, ವಿಕೃತಕಾಮಿ ಉಮೇಶ್ ರೆಡ್ಡಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ವಿಡಿಯೋಗಳು ವೈರಲ್ ಆಗಿ ಚರ್ಚೆಯಲ್ಲಿರುವಾಗಲೇ, ಜೈಲಿನ ಕರ್ಮಕಾಂಡದ ಮತ್ತೊಂದು ವಿಡಿಯೋ ಹೊರ ಬಂದಿದೆ. ಜೈಲಲ್ಲಿ ಕೈದಿಗಳ ಮದ್ಯ ಪಾರ್ಟಿ, ಡಾನ್ಸ್‌ - ಮತ್ತೊಂದು ವಿಡಿಯೋ ಬಹಿರಂಗ

 ಬೆಂಗಳೂರು :  ಶಂಕಿತ ಐಸಿಸ್‌ ಉಗ್ರ ಶಕೀಲ್‌, ವಿಕೃತಕಾಮಿ ಉಮೇಶ್ ರೆಡ್ಡಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ವಿಡಿಯೋಗಳು ವೈರಲ್ ಆಗಿ ಚರ್ಚೆಯಲ್ಲಿರುವಾಗಲೇ, ಜೈಲಿನ ಕರ್ಮಕಾಂಡದ ಮತ್ತೊಂದು ವಿಡಿಯೋ ಹೊರ ಬಂದಿದೆ.

ಕೈದಿಗಳು ಮದ್ಯ ಸೇವಿಸಿ ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದು ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ವಿಡಿಯೋಗಳು ಪರಪ್ಪನ ಅಗ್ರಹಾರ ಜೈಲಿನದ್ದಾ ಅಥವಾ ಬೇರೆ ಜೈಲಿನದ್ದಾ ಎಂಬ ಆಯಾಮದಲ್ಲಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಕೈದಿಗಳು ಮದ್ಯ ಸೇವಿಸಿ ಕಬಾಬ್‌ ತಿಂದು, ಪ್ಲೇಟು, ಡ್ರಮ್ ಬಡಿದು ಭರ್ಜರಿ ಸ್ಟೆಪ್ಸ್‌ ಹಾಕಿರುವುದು ವಿಡಿಯೋದಲ್ಲಿದೆ.

ಜೈಲಿನ ಮೇಲೆ ದಾಳಿ:

ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಅಲರ್ಟ್​ ಆಗಿರುವ ಜೈಲಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್​ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಒಟ್ಟು 100ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿ ಕೈದಿಗಳ ಬ್ಯಾರಕ್​ಗಳ ಪರಿಶೀಲನೆ ಮಾಡಿದ್ದು, ಪರಿಶೀಲನೆ ವೇಳೆ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಬ್ಯಾರಕ್​ಗಳಲ್ಲಿ ಸಿಬ್ಬಂದಿ ಪರಿಶೀಲನೆ ವೇಳೆ ಯಾವುದೇ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ದಾಳಿಯ ಮಾಹಿತಿ ಸೋರಿಕೆಗಿರುವ ಅನುಮಾನ ವ್ಯಕ್ತವಾಗಿದೆ.

ಶಂಕಿತ ಉಗ್ರನ ಹಿನ್ನೆಲೆ 

:ಬೆಂಗಳೂರಿನ ತಿಲಕ್‌ನಗರದ ನಿವಾಸಿಯಾದ ಜುಹಾದ್‌ ಹಮೀದ್‌ ಶಕೀಲ್‌, ಮೂಲಭೂತವಾದಿ ಮನಸ್ಥಿತಿಯುಳ್ಳ ಮುಸ್ಲಿಂ ಯುವಕರನ್ನು ಐಸಿಸ್‌ಗೆ ನೇಮಕ ಮಾಡುತ್ತಿದ್ದ. ʻಇಕ್ರಾ ಸರ್ಕಾಲ್‌ʼ ಹೆಸರಿನಲ್ಲಿ ಆನ್‌ಲೈನ್‌ ಗ್ರೂಪ್‌ ರಚಿಸಿ ಉಗ್ರರ ಸಂಘಟನೆಗೆ ನೇಮಕಾತಿ ನಡೆಸುತ್ತಿದ್ದ. ಅದರಂತೆ ಬೆಂಗಳೂರಿನ ನಾಲ್ವರನ್ನು ಸಿರಿಯಾಗೆ ಕರೆದೊಯ್ದಿದ್ದ. ಆದರೆ ಟರ್ಕಿಯ ಇಸ್ತಾಂಬುಲ್ ರೆಫ್ಯೂಜಿ ಕ್ಯಾಂಪ್‌ನಲ್ಲೇ ಇಬ್ಬರು ಮೃತಪಟ್ಟಿದ್ದರು. ಸಿರಿಯಾ ದೇಶಾದ್ಯಂತ ಐಸಿಸ್ ಉಗ್ರರ ಜತೆ ನಿರಂತರವಾಗಿ ಸಂಪರ್ಕ ಹೊಂದಿದ್ದ ಶಕೀಲ್‌ನನ್ನು 2020ರಲ್ಲಿ ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿತ್ತು. 2022ರಲ್ಲಿ ಸೌದಿಯಿಂದ ಭಾರತಕ್ಕೆ ಗಡೀಪಾರಾಗಿದ್ದ. ಕಳೆದ ಮೂರು ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಲ್ಲಿ ಶಕೀಲ್‌ ಶಿಕ್ಷೆ ಅನುಭವಿಸುತ್ತಿದ್ದಾನೆ. ಆದರೆ ಶಿಕ್ಷೆಗೆ ಗುರಿಯಾಗಿರುವ ಕೈದಿಗೆ ವಿಶೇಷ ಆತಿಥ್ಯ ನೀಡಿರುವುದು ಕಾನೂನು ಸುವ್ಯಸ್ಥೆ ಮೇಲೆಯೇ ಅನುಮಾನ ಮೂಡುವಂತೆ ಮಾಡಿದೆ.

ಜೈಲಲ್ಲಿ ಕೈದಿಗಳಿಗೆ ರಾಜಾತಿಥ್ಯ ಪತ್ತೆಗೆ ಸಮಿತಿ: ಪರಮೇಶ್ವರ್‌

ಬೆಂಗಳೂರು:ಪರಪ್ಪನ ಅಗ್ರಹಾರ ಕೈದಿಗಳಿಗೆ ನಿಯಮ ಮೀರಿ ವಿಶೇಷ ಸವಲತ್ತು ನೀಡಿರುವ ವಿಚಾರವಾಗಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳ ಐಷಾರಾಮಿ ಜೀವನದ ಕುರಿತು ಪರಿಶೀಲನೆಗೆ ಸಮಿತಿ ರಚಿಸಲಾಗುವುದು. ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ತಿಳಿಸಿದ್ದಾರೆ.--

ಜೈಲಾತಿಥ್ಯ ಬಗ್ಗೆ ಇಂದು ಸಭೆ

ಪರಪ್ಪನ ಘಟನೆ ಸಂಬಂಧ ಚರ್ಚಿಸಲು ಸೋಮವಾರ ನಾನು ಅಧಿಕಾರಿಗಳ ಸಭೆ ಕರೆದಿದ್ದೇನೆ. ಗೃಹ ಸಚಿವರೂ ಸಭೆ ಕರೆದಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

--

Read more Articles on