ಸಾರಾಂಶ
ಬೆಂಗಳೂರು : ಸೈಬರ್ ವಂಚಕರು ಹೋಟೆಲ್ ನೌಕರರೊಬ್ಬರಿಗೆ ಅಧಿಕ ಲಾಭದ ಆಸೆ ತೋರಿಸಿ ಹೂಡಿಕೆ ನೆಪದಲ್ಲಿ ಬರೋಬ್ಬರಿ 43.15 ಲಕ್ಷ ರು. ಹಣ ಪಡೆದು ವಂಚಿಸಿದ ಆರೋಪದಡಿ ವೈಟ್ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಆರ್.ಪುರ ಸೀಗೆಹಳ್ಳಿ ನಿವಾಸಿ ಜಯಕುಮಾರ್(40) ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ರಾಶಿ ಅರೋರಾ ಸೇರಿ ಇತರರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ:
ದೂರುದಾರ ಜಯಕುಮಾರ್ ಅವರನ್ನು ಕಳೆದ ಡಿಸೆಂಬರ್ನಲ್ಲಿ ಅಪರಿಚಿತರು ಆಕ್ಸಿಸ್ ಸ್ಟಾಕ್ ಎಕ್ಸ್ಚೇಂಜ್ ಗ್ರೂಪ್ ಮತ್ತು ಏಂಜೆಲ್ ಒನ್ ಎಂಬ ವಾಟ್ಸಾಪ್ ಗ್ರೂಪ್ಗೆ ಸೇರಿಸಿದ್ದಾರೆ. ಬಳಿಕ ರಾಶಿ ಅರೋರಾ ಮತ್ತು ಪ್ರಿಯಾಂಕಾ ಸಿಂಗ್ ಎಂಬುವವರು ಕರೆ ಮಾಡಿ ಸ್ಟಾಕ್ ಮಾರ್ಕೆಟ್ ಹೂಡಿಕೆ ಬಗ್ಗೆ ಮಾತನಾಡಿದ್ದಾರೆ. ಹೂಡಿಕೆ ಮಾಡಿದರೆ ಅಧಿಕ ಲಾಭ ಬರಲಿದೆ ಎಂದು ನಂಬಿಸಿದ್ದಾರೆ. ಇವರ ಮಾತು ನಂಬಿದ ಜಯಕುಮಾರ್, ಅಪರಿಚಿತರು ಕಳುಹಿಸಿದ ಲಿಂಕ್ ಮುಖಾಂತರ ಮೊಬೈಲ್ನಲ್ಲಿ ಏಂಜೆಲ್ ಒನ್, ಪ್ಲೇ ಸ್ಟೋರ್, ಏ ಡೈರೆಕ್ಟ್ ಆ್ಯಪ್ ಇನ್ಸ್ಸ್ಟಾಲ್ ಮಾಡಿಕೊಂಡಿದ್ದಾರೆ.
45.65 ಲಕ್ಷ ರು. ವರ್ಗಾವಣೆ:
ಬಳಿಕ ಅಪರಿಚಿತರ ಸೂಚನೆ ಮೇರೆಗೆ ಅವರು ನೀಡಿದ ಬ್ಯಾಂಕ್ ಖಾತೆಗಳು ಹಾಗೂ ಯುಪಿಐ ಐಡಿಗೆ ವಿವಿಧ ಹಂತಗಳಲ್ಲಿ 45.65 ಲಕ್ಷ ರು. ಹಣ ವರ್ಗಾಯಿಸಿದ್ದಾರೆ. ಬಳಿಕ ದುಷ್ಕರ್ಮಿಗಳು ಲಾಭಾಂಶವೆಂದು 2.49 ಲಕ್ಷ ರು. ಹಣ ಹಾಕಿದ್ದಾರೆ. ಉಳಿದ 43.15 ಲಕ್ಷ ರು. ಹಣ ವಾಪಾಸ್ ನೀಡುವಂತೆ ಕೇಳಿದಾಗ, ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿದರೆ, ಉಳಿಕೆ ಹಣ ವಿತ್ ಡ್ರಾ ಮಾಡಬಹುದು ಎಂದು ಹೇಳಿದ್ದಾರೆ.
ಈ ವೇಳೆ ಜಯಕುಮಾರ್ಗೆ ತಾನು ಆನ್ಲೈನ್ ಸೈಬರ್ ವಂಚಕರ ಬಲೆಗೆ ಬಿದ್ದು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.