ಸಾರಾಂಶ
ಸಾಕು ನಾಯಿ ವಿಚಾರಕ್ಕೆ ಜಗಳ ನಡೆದು ಪರಸ್ಪರ ಹಲ್ಲೆ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವಿನ ಪ್ರಕರಣ ಕೊನೆಗೆ ರಾಜೀ ಸಂಧಾನದಲ್ಲಿ ಸುಖಾಂತ್ಯವಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಕು ನಾಯಿ ವಿಚಾರಕ್ಕೆ ಜಗಳ ನಡೆದು ಪರಸ್ಪರ ಹಲ್ಲೆ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವಿನ ಪ್ರಕರಣ ಕೊನೆಗೆ ರಾಜೀ ಸಂಧಾನದಲ್ಲಿ ಸುಖಾಂತ್ಯವಾಗಿದೆ.ಪಂಜಾಬ್ ಮೂಲದ ಪೂಜಾ ಅವರು ಕುಟುಂಬದೊಂದಿಗೆ ಜೀವನಭೀಮಾನಗರದ ಪ್ರಮೀಳಾ ಎಂಬುವವರ ಮನೆಯನ್ನು ಭೋಗ್ಯಕ್ಕೆ ಪಡೆದು ವಾಸವಾಗಿದ್ದರು. ಭೋಗ್ಯದ ವೇಳೆ ಮನೆಯಲ್ಲಿ ನಾಯಿ ಸಾಕುವಂತೆ ಇಲ್ಲ ಎಂದು ಮಾಲೀಕರು ಹೇಳಿದ್ದರು. ಆದರೂ ಪೂಜಾ ಅವರು ಮನೆಯಲ್ಲಿ ನಾಯಿ ಸಾಕಿದ್ದರು. ಇದೇ ವಿಚಾರವಾಗಿ ಫೆ. 2ರ ತಡರಾತ್ರಿ ಪೂಜಾ ಮತ್ತು ಪ್ರಮಿಳಾ ಮನೆಯವರ ನಡುವೆ ಪರಸ್ಪರ ಜಗಳ ನಡೆದು ಹೊಡೆದಾಡಿಕೊಂಡಿದ್ದರು.
ಬಾಡಿಗೆದಾರರಾದ ಪೂಜಾ, ಮನೆಯ ಮಾಲೀಕರಾದ ಪ್ರಮೀಳಾ ಹಾಗೂ ಅವರ ಸಹಚರರ ವಿರುದ್ಧ ಜೀವನಭೀಮಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಮನೆ ಮಾಲೀಕರಾದ ಪ್ರಮೀಳಾ, ಬಾಡಿಗೆದಾರರಾದ ಪೂಜಾ ಹಾಗೂ ಅವರ ಕುಟುಂಬದ ವಿರುದ್ಧ ದೂರು ನೀಡಲು ಠಾಣೆಗೆ ಬಂದಿದ್ದರು.ಈ ವೇಳೆ ಪೊಲೀಸರು ಎರಡೂ ಕಡೆಯವರನ್ನು ಕರೆಸಿ ವಿಚಾರಣೆ ಮಾಡಿದಾಗ, ಇಬ್ಬರು ತಮ್ಮ ತಪ್ಪಿನ ಅರಿವಾಗಿ ರಾಜಿ ಮಾಡಿಕೊಳ್ಳುವುದಾಗಿ ತಿಳಿಸಿ ದೂರು ಹಿಂಪಡೆದಿದ್ದಾರೆ. ಇನ್ನು ಮುಂದೆ ಯಾವುದೇ ಜಗಳ ಮಾಡಿಕೊಳ್ಳದೆ ಹೊಂದಾಣಿಕೆಯಿಂದ ಇರುವುದಾಗಿ ಇಬ್ಬರೂ ಲಿಖಿತವಾಗಿ ಬರೆದುಕೊಟ್ಟು ಪರಸ್ಪರ ಹಸ್ತಲಾಘವ ಮಾಡಿ ಮನೆ ಕಡೆಗೆ ಹಜ್ಜೆ ಹಾಕಿದ್ದಾರೆ.