ಸಾರಾಂಶ
ಭೂಗತ ಜಗತ್ತಿನ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಶೂಟ್ ಔಟ್ ನಡೆದು ಐದು ದಿನಗಳಾದರೂ, ಪ್ರಕರಣ ಭೇದಿಸುವುದು ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ.
ರಾಮನಗರ : ಭೂಗತ ಜಗತ್ತಿನ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಶೂಟ್ ಔಟ್ ನಡೆದು ಐದು ದಿನಗಳಾದರೂ, ಪ್ರಕರಣ ಭೇದಿಸುವುದು ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ.
ಸದ್ಯಕ್ಕೆ ಮುತ್ತಪ್ಪ ರೈ ಮಾಜಿ ಗನ್ ಮ್ಯಾನ್ ಮನ್ನಪ್ಪ ವಿಠ್ಠಲ್ ಮೇಲೆ ಪೊಲೀಸರ ಅನುಮಾನ ಬಲವಾಗಿದ್ದು, ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಮನ್ನಪ್ಪ ವಿಠ್ಠಲ್ನನ್ನು ಒಂದು ಸುತ್ತು ವಿಚಾರಣೆ ನಡೆಸಿದ್ದು, ಎದೆನೋವು ಕಾಣಿಸಿಕೊಂಡ ಪರಿಣಾಮ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಆತ ಆಸ್ಪತ್ರೆಯಿಂದ ಹೊರಗೆ ಬರಲಿದ್ದು, ಪೊಲೀಸರು ಮತ್ತೊಮ್ಮೆ ವಿಚಾರಣೆ ನಡೆಸಲು ತಯಾರಿ ನಡೆಸಿದ್ದಾರೆ.
ಶೂಟ್ ಔಟ್ ಸ್ಥಳದಲ್ಲಿ ಸಿಕ್ಕಿರುವ ಬುಲೆಟ್ ವಿಠ್ಠಲ್ ಬಳಿ ಇದ್ದ ಗನ್ನ ಬುಲೆಟ್ ಎಂದು ಪೊಲೀಸರು ಶಂಕಿಸಿದ್ದು, ಈತನ ಗನ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಈತ ಕೆಲಕಾಲ ರಿಕ್ಕಿಗೂ ಗನ್ಮ್ಯಾನ್ ಆಗಿದ್ದ. ಆರೋಗ್ಯ ಸರಿ ಇಲ್ಲದ ಕಾರಣ ಮನೆಯಲ್ಲೇ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ. ಮುತ್ತಪ್ಪ ರೈ ಸಾಯುವ ಮುನ್ನ ಈತನಿಗೆ ಸೈಟ್ ನೀಡುವುದಾಗಿ ಹೇಳಿದ್ದರು. ಆದರೆ, ರಿಕ್ಕಿರೈ ಸೈಟ್ ಕೊಡಲು ನಿರಾಕರಿಸಿದ್ದರೆನ್ನಲಾಗಿದೆ. ಈ ಕಾರಣಕ್ಕೆ ವಿಠ್ಠಲ್ ಗುಂಡು ಹಾರಿಸಿದನಾ ಎಂಬ ಸಂದೇಹ ಪೊಲೀಸರನ್ನು ಕಾಡುತ್ತಿದೆ.
ಶೂಟ್ ಔಟ್ ನಡೆದ ದಿನ ವಿಠಲ್ ಬಿಡದಿ ನಿವಾಸದ ಹಿಂಬಾಗಿಲಿನಿಂದ ಹೊರಗೆ ಬಂದು ಮತ್ತೆ ಅದೇ ಬಾಗಿಲಿಂದ ಒಳಗೆ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಸಹ ಪೊಲೀಸರ ಅನುಮಾನ ಹೆಚ್ಚಳಕ್ಕೆ ಕಾರಣವಾಗಿದೆ.