ಸಾರಾಂಶ
ಕಂಟೈನರ್ ಹಾಗೂ ಬೈಕ್ ನಡುವಿನ ಅಪಘಾತದಿಂದಾಗಿ ಇಬ್ಬರು ನೃತ್ಯ ಕಲಾವಿದರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನೆಲಮಂಗಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೆಲಮಂಗಲ/ದಾಬಸ್ಪೇಟೆ: : ಕಂಟೈನರ್ ಹಾಗೂ ಬೈಕ್ ನಡುವಿನ ಅಪಘಾತದಿಂದಾಗಿ ಇಬ್ಬರು ನೃತ್ಯ ಕಲಾವಿದರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನೆಲಮಂಗಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ಕುಣಿಗಲ್ ಬೈಪಾಸ್ ವೃತ್ತದಲ್ಲಿ ದುರ್ಘಟನೆ ನಡೆದಿದ್ದು, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡಮುಡಿಕೆ ಗ್ರಾಮದ ಪ್ರಜ್ವಲ್ (22), ಬೆಂಗಳೂರಿನ ಕುರುಬರಹಳ್ಳಿ ನಿವಾಸಿ ಸಹನಾ (21) ಮೃತಪಟ್ಟ ದುರ್ದೈವಿಗಳು. ಪ್ರಜ್ವಲ್ ಬೆಂಗಳೂರಿನ ಲಕ್ಷ್ಮಿ ನಾರಾಯಣಪುರದಲ್ಲಿ ವಾಸವಿದ್ದನು.
ಪ್ರಜ್ವಲ್ ಹಾಗೂ ಸಹನ ಇಬ್ಬರು ನೃತ್ಯಗಾರರೂ ಸಿನೆಮಾ, ಸ್ಟೇಜ್ ಪ್ರೋಗ್ರಾಂ, ಇವೆಂಟ್ ಹಾಗೂ ಸ್ಕೂಲ್ ಇವೆಂಟ್ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ನೃತ್ಯ ಮಾಡಿದ್ದರು.
ಘಟನಾ ವಿವರ:
ಜೂ.15ರಂದು ಭಾನುವಾರ ಕಾರ್ಯಕ್ರಮವೊಂದರಲ್ಲಿ ಒಟ್ಟು ಆರು ಜನ ಭಾಗವಹಿಸಿ, ಸೋಮವಾರ ಮಧ್ಯರಾತ್ರಿ ವಾಪಸ್ ಬೆಂಗಳೂರಿಗೆ ಹೋಗಲು ಮೂರು ಬೈಕ್ ಗಳಲ್ಲಿ ಆರು ಜನ ಬರುತ್ತಿದ್ದರು. ಈ ವೇಳೆ ನೆಲಮಂಗಲದ ಕುಣಿಗಲ್ ಬೈಪಾಸ್ ಬಳಿ ಬೆಂಗಳೂರು ಕಡೆಯಿಂದ ಹೋಗುತ್ತಿದ್ದ ಲಾರಿ ಹಾಗೂ ಕುಣಿಗಲ್ ಕಡೆಯಿಂದ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಲಾರಿಯ ಚಕ್ರಕ್ಕೆ ಸಿಲುಕಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ಪ್ರಜ್ವಲ್ ತಾಯಿ ಹಾಗೂ ಅಕ್ಕಜೊತೆ ವಾಸವಿದ್ದರೆ, ಸಹನ ತಾಯಿ ಹಾಗೂ ತಮ್ಮನ ಜೊತೆ ನೆಲೆಸಿದ್ದರು.
ಕುಟುಂಬಸ್ಥರ ಆಕ್ರಂದನ: ಮೃತಪಟ್ಟ ಇಬ್ಬರು ಕುಟುಂಬಸ್ಥರು, ಸಂಬಂಧಿಗಳು, ಸ್ನೇಹಿತರು ಆಸ್ಪತ್ರೆ ಬಳಿ ಜಮಾಯಿಸಿದರು. ಎರಡೂ ಕುಟುಂಬಗಳಿಗೆ ಆಧಾರಸ್ತಂಭಗಳಾಗಿದ್ದ ಇಬ್ಬರು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವಿ ಭೇಟಿ ನೀಡಿ ಪರಿಶೀಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.