ಸಾರಾಂಶ
ರಾಮನಗರ ಜಿಲ್ಲೆ ಚನ್ನಪಟ್ಟಣದ ಜೀವನ್ ಪುರ ಬಡಾವಣೆಯ ಆಸೀಫ್ ಖಾನ್ ಪುತ್ರ ಮೆಹರಾನ್ ಖಾನ್ ಮೃತಪಟ್ಟ ಬೈಕ್ ಹಿಂಬದಿ ಸವಾರ. ಅಪಘಾತದಲ್ಲಿ ತಲೆಗೆ ಬಿದ್ದ ಪೆಟ್ಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಮೆಹರಾನ್ ಖಾನ್ ನನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ವೇಳೆ ಕೊನೆ ಉಸಿರೆಳೆದಿದ್ದಾನೆ.
ಕನ್ನಡಪ್ರಭ ವಾರ್ತೆ ಮದ್ದೂರು
ಬೈಕ್ಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಪರಿಣಾಮ ಹಿಂಬದಿ ಸವಾರ ಮೃತಪಟ್ಟು, ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಸೋಮವಾರ ಬೆಳಗಿನ ಜಾವ ಜರುಗಿದೆ.ರಾಮನಗರ ಜಿಲ್ಲೆ ಚನ್ನಪಟ್ಟಣದ ಜೀವನ್ ಪುರ ಬಡಾವಣೆಯ ಆಸೀಫ್ ಖಾನ್ ಪುತ್ರ ಮೆಹರಾನ್ ಖಾನ್ (21) ಮೃತಪಟ್ಟ ಬೈಕ್ ಹಿಂಬದಿ ಸವಾರ. ಅಪಘಾತದಲ್ಲಿ ತಲೆಗೆ ಬಿದ್ದ ಪೆಟ್ಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಮೆಹರಾನ್ ಖಾನ್ ನನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ವೇಳೆ ಕೊನೆ ಉಸಿರೆಳೆದಿದ್ದಾನೆ.ಬೈಕ್ ಚಾಲನೆ ಮಾಡುತ್ತಿದ್ದ ಮಹಮದ್ ಕಾಸಿಂ ಗಾಯಗೊಂಡಿದ್ದು, ಮದ್ದೂರು ಆಸ್ಪತ್ರೆ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಮೆಹರಾನ್ ಖಾನ್ ಹಾಗೂ ಗಾಯಾಳು ಮಹಮದ್ ಖಾಸಿಂ ಕುರಿ ವ್ಯಾಪಾರಿಗಳಾಗಿದ್ದು, ಇಬ್ಬರು ಬೈಕ್ನಲ್ಲಿ ಚನ್ನಪಟ್ಟಣದಿಂದ ಟಿ.ನರಸೀಪುರ ಸಂತೆಗೆ ಕುರಿಗಳನ್ನು ಖರೀದಿಸಲು ತೆರಳುತ್ತಿದ್ದರು. ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಮದ್ದೂರು ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬೆಂಗಳೂರು ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮೈಸೂರಿನಿಂದ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ತೆರಳಲು ರಸ್ತೆ ವಿಭಜಕದ ಮಧ್ಯೆ ತಿರುವು ತೆಗೆದುಕೊಳ್ಳುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಅಪಘಾತ ವೆಸಗಿದ ಬಸ್ಸನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.