ಸಾರಾಂಶ
ನೂಹ್ (ಹರ್ಯಾಣ): ಕೆಲವು ತಿಂಗಳ ಹಿಂದೆ ಕೋಮು ಸಂಘರ್ಷದಿಂದ ತತ್ತರಿಸಿದ್ದ ಹರ್ಯಾಣದ ನೂಹ್ನಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿದೆ. 20 ಜನ ಅಪ್ರಾಪ್ತರ ಗುಂಪೊಂದು ಗುರುವಾರ ರಾತ್ರಿ, ಮಸೀದಿ ಮುಂದೆ ಧಾರ್ಮಿಕ ಕಾರ್ಯಕ್ಕೆಂದು ತೆರಳುತ್ತಿದ್ದ ಒಂದು ನಿರ್ದಿಷ್ಟ ಕೋಮಿನ ಮಹಿಳೆಯರ ಮೇಲೆ ಕಲ್ಲು ತೂರಿದ್ದು, 8 ಮಹಿಳೆಯರಿಗೆ ಗಾಯಗಳಾಗಿವೆ.
ಮದರಸಾ ಮಕ್ಕಳಿಂದ ಕಲ್ಲೆಸೆತ: 8 ಮಹಿಳೆಯರಿಗೆ ಗಾಯ
ನೂಹ್ (ಹರ್ಯಾಣ): ಕೆಲವು ತಿಂಗಳ ಹಿಂದೆ ಕೋಮು ಸಂಘರ್ಷದಿಂದ ತತ್ತರಿಸಿದ್ದ ಹರ್ಯಾಣದ ನೂಹ್ನಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿದೆ. 20 ಜನ ಅಪ್ರಾಪ್ತರ ಗುಂಪೊಂದು ಗುರುವಾರ ರಾತ್ರಿ, ಮಸೀದಿ ಮುಂದೆ ಧಾರ್ಮಿಕ ಕಾರ್ಯಕ್ಕೆಂದು ತೆರಳುತ್ತಿದ್ದ ಒಂದು ನಿರ್ದಿಷ್ಟ ಕೋಮಿನ ಮಹಿಳೆಯರ ಮೇಲೆ ಕಲ್ಲು ತೂರಿದ್ದು, 8 ಮಹಿಳೆಯರಿಗೆ ಗಾಯಗಳಾಗಿವೆ.ಇದರ ಬೆನ್ನಲ್ಲೇ ಪಟ್ಟಣದಲ್ಲಿ ಶುಕ್ರವಾರ ಮಾರುಕಟ್ಟೆಯನ್ನು ವ್ಯಾಪಾರಿಗಳು ಮುಚ್ಚಿದ್ದಾರೆ ಹಾಗೂ ಭಾರಿ ಪೊಲೀಸ್ ಬಂದೋಬಸ್ತ್ ಹಮ್ಮಿಕೊಳ್ಳಲಾಗಿದೆ.ಈ ಬಗ್ಗೆ ಹೇಳಿಕೆ ನೀಡಿರುವ ಎಸ್ಪಿ ನರೇಂದ್ರ ಬಿಜರ್ಣಿಯಾ, ‘ಪೂಜೆಗೆಂದು ತೆರಳುತ್ತಿದ್ದ ಮಹಿಳೆಯರ ಮೇಲೆ ಮದರಸಾದ ಬಾಲಕರು ಕಲ್ಲು ತೂರಿದ ದೂರು ಬಂದಿದೆ’ ಎಂದಿದ್ದಾರೆ. ಸ್ಥಳೀಯ ನಿವಾಸಿ ರಾಮ್ ಅವತಾರ್ ಎಂಬುವರು ''''ಕುವಾನ್ ಪೂಜನ್'''' (ಬಾವಿ ಪೂಜೆ) ಸಮಾರಂಭ ಹಮ್ಮಿಕೊಂಡಿದ್ದರು. ಈ ನಿಮಿತ್ತ ಅವರ ಕುಟುಂಬದ ಮಹಿಳೆಯರು ಶಿವ ದೇವಾಲಯಕ್ಕೆ ತೆರಳುತ್ತಿದ್ದರು. ಇವರು ಮಸೀದಿ ಮುಂದೆ ಬಂದಾಗ 20 ಅಪ್ರಾಪ್ತರ ತಂಡ ಕಲ್ಲು ತೂರಿದೆ. ಆಗ 8 ಮಹಿಳೆಯರಿಗೆ ಗಾಯವಾಗಿವೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಳಿಕ ಅಹಿತಕರ ಘಟನೆ ನಡೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.ಈ ನಡುವೆ ನೂಹ್ ಪೊಲೀಸ್ ವಕ್ತಾರ ಕೃಷ್ಣಕುಮಾರ್, ‘ಮದರಸಾ ಮಕ್ಕಳು ಆಟ ಆಡುವ ವೇಳೆ ಪರಸ್ಪರ ಚಪ್ಪಲಿ ತೂರಿಕೊಂಡಿದ್ದಾರೆ. ಅದು ಅಚಾನಕ್ಕಾಗಿ ಮಹಿಳೆಯರ ಮೇಲೆ ಬಿದ್ದಿದೆ ಎಂದು ಮದರಸಾ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಆದರೆ ಕಲ್ಲು ತೂರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ’ ಎಂದಿದ್ದಾರೆ.