ನಿಲ್ದಾಣದಲ್ಲಿ ಮೊಬೈಲ್‌ ಎಗರಿಸಿ ಓಡುತ್ತಿದ್ದ ಕಳ್ಳ; ಮೊಬೈಲ್‌ ಕಳ್ಳನನ್ನು ಬೆನ್ನಟಿ ಹಿಡಿದ ಸಂಚಾರ ಪೊಲೀಸರು

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕ ಸೋಗಿನಲ್ಲಿ ಮೊಬೈಲ್‌ ಕದ್ದು ಪರಾರಿ ಆಗುತ್ತಿದ್ದ ಕಳ್ಳನನ್ನು ಕೆ.ಆರ್‌.ಪುರ ಸಂಚಾರ ಠಾಣೆ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ತಮಿಳುನಾಡು ಮೂಲದ ಡ್ಯಾನಿಯಲ್‌ ಸಿಕ್ಕಿಬಿದ್ದ ಕಳ್ಳ. ಕೆ.ಆರ್‌.ಪುರ. ಸಂಚಾರ ಪೊಲೀಸ್‌ ಠಾಣೆಯ ಎಎಸ್‌ಐ ಲಕ್ಷ್ಮಣ ರೆಡ್ಡಿ, ಹೆಡ್‌ಕಾನ್‌ಸ್ಟೇಬಲ್‌ಗಳಾದ ರವೀಂದ್ರ, ಬಸವರಾಜು ಹಾಗೂ ಕಾನ್‌ಸ್ಟೇಬಲ್‌ ನವೀನ್‌ ಮೊಬೈಲ್ ಕಳ್ಳನನ್ನು ಹಿಡಿದವರು.

ರಾಮಮೂರ್ತಿನಗರದ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಇದ್ದು, ವ್ಯಕ್ತಿಯೊಬ್ಬ ಪ್ರಯಾಣಿಕರೊಬ್ಬರ ಮೊಬೈಲ್‌ ಎಗರಿಸಿ ಓಡಾಲು ಆರಂಭಿಸಿದ್ದಾನೆ. ಈ ವೇಳೆ ಪ್ರಯಾಣಿಕರು ಕಳ್ಳ ಕಳ್ಳ ಎಂದು ಕೂಗಿದಾಗ, ಸಮೀಪದಲ್ಲೇ ಸಂಚಾರ ನಿರ್ವಹಣೆ ಕರ್ತವ್ಯದಲ್ಲಿ ನಿರತರಾಗಿದ್ದ ಸಂಚಾರ ಎಎಸ್‌ಐ ಲಕ್ಷ್ಮಣ ರೆಡ್ಡಿ ಹಾಗೂ ಹೆಡ್‌ಕಾನ್ಸ್‌ಟೇಬಲ್‌ ರವೀಂದ್ರ, ಕಾನ್‌ಸ್ಟೇಬಲ್‌ ಬಸವರಾಜು ತಕ್ಷಣ ಎತ್ತೆಚ್ಚುಕೊಂಡು ಬೆನ್ನಟ್ಟಿ ಆರೋಪಿಯನ್ನು ಹಿಡಿದಿದ್ದಾರೆ.

112 ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಬಳಿಕ ರಾಮಮೂರ್ತಿನಗರ ಠಾಣೆಯ ಹೊಯ್ಸಳ ಗಸ್ತು ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಆರೋಪಿಯನ್ನು ಬೆನ್ನಟ್ಟಿ ಹಿಡಿದ ಸಂಚಾರ ಪೊಲೀಸರ ಕರ್ತವ್ಯ ಪ್ರಜ್ಞೆಗೆ ಹಿರಿಯ ಪೊಲೀಸ್‌ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.