ಸಾಲಬಾಧೆಯಿಂದ ಬೇಸತ್ತು ವಿಷ ಸೇವಿಸಿ ರೈತ ಆತ್ಮಹತ್ಯೆ

| Published : Nov 14 2025, 01:45 AM IST

ಸಾರಾಂಶ

ಬೆಳೆ ನಷ್ಟ, ಸಾಲಬಾಧೆಯಿಂದ ಬೇಸತ್ತು ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊನ್ನೇಗೌಡರ ಪುತ್ರ ಗೋವಿಂದ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡ ರೈತ.

ಪಾಂಡವಪುರ:

ಬೆಳೆ ನಷ್ಟ, ಸಾಲಬಾಧೆಯಿಂದ ಬೇಸತ್ತು ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೇವಿನಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹೊನ್ನೇಗೌಡರ ಪುತ್ರ ಗೋವಿಂದ (58) ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡ ರೈತ. ಮೃತರಿಗೆ ಪತ್ನಿ ರತ್ನಮ್ಮ, ಪುತ್ರಿ ಅರ್ಪಿತ ಹಾಗೂ ಪುತ್ರ ಪುನೀತ್ ಇದ್ದಾರೆ.ತಮ್ಮ ಆರು ಮಂದಿ ಸಹೋದರರಲ್ಲಿ 4ನೇಯವರಾದ ಗೋವಿಂದ ಒಟ್ಟು ಕುಟುಂಬದ 10 ಎಕರೆ ಜಮೀನಿನಲ್ಲಿ ವ್ಯವಸಾಯ ಕೈಗೊಂಡಿದ್ದರು. ಇತ್ತೀಚೆಗೆ ಪುತ್ರಿ ಮದುವೆ ಕೂಡ ನಿಶ್ಚಯವಾಗಿ 8 ಲಕ್ಷ ರು.ಸಾಲ ಮಾಡಿಕೊಂಡಿದ್ದರು. ಅಲ್ಲದೇ, ಮೈಕ್ರೋ ಫೈನಾನ್ಸ್, ಕೈ ಸಾಲ, ಬ್ಯಾಂಕ್‌ಸಾಲ ಸೇರಿ ಸುಮಾರು 22 ಲಕ್ಷ ರು. ಸಾಲದ ಹೊರೆ ಭರಿಸಲಾಗದಷ್ಟು ಹೆಚ್ಚಾಗಿತ್ತು ಎಂದು ತಿಳಿದುಬಂದಿದೆ. ಇದರೊಂದಿಗೆ 1 ಎಕರೆ 6 ಗುಂಟೆ ಜಾಗದಲ್ಲಿ ಟೊಮೆಟೋ ಬೆಳೆ ಹಾಕಿದ್ದ ಗೋವಿಂದ ಇದಕ್ಕೂ ಕೈಸಾಲ ಮಾಡಿದ್ದರು. ಫಸಲೂ ಬಾರದೆ ಕೈಸುಟ್ಟುಕೊಂಡಿದ್ದರು.

ಬೆಳೆ ನಷ್ಟ, ಸತತ ಸಾಲಗಾರರ ಒತ್ತಡ ಹೆಚ್ಚಾದ ಪರಿಣಾಮ ಬುಧವಾರ ರಾತ್ರಿ ತಮ್ಮ ಜಮೀನಿನ ಬಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ವಿಷಯ ತಿಳಿದು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಘಟನೆ ಸಂಬಂಧ ಮೃತ ರೈತ ಗೋವಿಂದ ಅವರ ಪುತ್ರ ಪುನೀತ್ ನೀಡಿದ ದೂರಿನ ಮೇರೆಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.