ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣಿಗೆ ಶರಣು..!

| Published : Mar 23 2024, 01:04 AM IST / Updated: Mar 23 2024, 04:16 PM IST

Gorakhpur Body hanging tree

ಸಾರಾಂಶ

ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಾಜೇಂದ್ರ ಹಾಗೂ ಮಂಜುಳಾ ಪುತ್ರಿ ಎಲ್.ಆರ್.ಪ್ರೇಮಕುಮಾರಿ (26) ಆತ್ಮಹತ್ಯೆ ಮಾಡಿಕೊಂಡವರು.

ರಾಜೇಂದ್ರ ಅವರ 3ನೇ ಪುತ್ರಿ ಪ್ರೇಮಕುಮಾರಿ ಅವರನ್ನು ಮೈಸೂರಿನ ಎನ್.ಆರ್.ಮೊಹಲ್ಲಾದ ನಿವಾಸಿ ಕುಮಾರಸ್ವಾಮಿ ಅವರ ಪುತ್ರ ರಾಘವೇಂದ್ರನಿಗೆ 2 ವರ್ಷಗಳ ಹಿಂದೆ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. 

ವಿವಾಹದ ವೇಳೆ 150 ಗ್ರಾಂ ಚಿನ್ನ, 5 ಲಕ್ಷ ರು. ನಗದು ಕೂಡ ವರದಕ್ಷಿಣೆಯಾಗಿ ನೀಡಲಾಗಿತ್ತು ಎನ್ನಲಾಗಿದೆ.

ಅರಂಭದ ಕೆಲವು ತಿಂಗಳು ಅನೋನ್ಯವಾಗಿ ಬಾಳ್ವೆ ನಡೆಸುತ್ತಿದ್ದರು. ಕೆಲವು ತಿಂಗಳ ನಂತರ ಹಣದ ದಾಹ ಗಂಡನ ಮನೆಯವರ ಮನ ಹೊಕ್ಕಿದೆ. 

ಪರಿಣಾಮ ಮೃತನ ಪತ್ನಿ ಹಾಗೂ ಕುಟುಂಬದವರು ಮತ್ತಷ್ಟು ಹಣವನ್ನುವರದಕ್ಷಿಣೆಯಾಗಿ ತವರು ಮನೆಯಿಂದ ತರಲು ಆಗಿಂದಾಗ್ಗೆ ಹಿಂಸೆ ನೀಡಲು ಆರಂಭಿಸಿದ್ದಾರೆ.

ನಿತ್ಯ ಗಲಾಟೆ, ಹೊಡೆಯುವುದು, ಬೆದರಿಕೆ ಹಾಕುವುದು ನಡೆದಿದೆ. ಈ ಕುರಿತು ಸಾಕಷ್ಟು ರಾಜಿ, ಪಂಚಾಯ್ತಿಗಳು ನಡೆದಿವೆ. 

ಯಾವುದೂ ಪ್ರಯೋಜನವಾಗದೆ, ನಂತರ ಗಂಡನ ಮನೆಯವರ ಹಿಂಸೆ ತಾಳಲಾರದೆ ವರ್ಷದ ಹಿಂದೆ ಮಹಿಳೆ ಪೋಷಕರು ಸ್ವಗ್ರಾಮದ ಮನೆಗೆ ಪ್ರೇಮ ಕುಮಾರಿಯನ್ನು ಕರೆದುಕೊಂಡು ಬಂದಿದ್ದರು.

ದಾಂಪತ್ಯ ಕಲಹ, ವರದಕ್ಷಿಣೆ ಕಿರುಕುಳ ಸಂಬಂಧ ಕಿಕ್ಕೇರಿ, ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಲಾಗಿತ್ತು ಹಾಗೂ ಕೆ.ಆರ್.ಪೇಟೆ ನ್ಯಾಯಾಲಯದಲ್ಲಿ ದಾವೆ ಕೂಡ ಹೂಡಲಾಗಿತ್ತು.

ಪ್ರೇಮಕುಮಾರಿ ತನ್ನ ಭವಿಷ್ಯ ರೂಪಿಸಿಕೊಳ್ಳಲು ಹಾಸನದಲ್ಲಿ ಎಲ್‌ಎಲ್‌ಬಿ ವ್ಯಾಸಂಗಕ್ಕಾಗಿ ಸೇರಿಕೊಂಡಿದ್ದಳು. 

ಕಳೆದ ವಾರ ಪತಿ ರಾಘವೇಂದ್ರ ತನ್ನ ಕುಟುಂಬದರೊಂದಿಗೆ ಸೇರಿಕೊಂಡು ಈಕೆಗೆ ಪೋನ್ ಮಾಡಿ ಹಣ ತಂದು ಕೊಡುವಂತೆ ಬೆದರಿಕೆ ಹಾಕಿದ್ದು ಅಲ್ಲದೇ, ಹಣ ನೀಡಲು ನಿರಾಕರಿಸಿದರೆ ಸುಫಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.

ತನ್ನ ಪತಿ, ಕುಟುಂಬದವರ ಬೆದರಿಕೆಗೆ ಹೆದರಿ ಡೆತ್‌ನೋಟ್ ಬರೆದು ತವರು ಮನೆ ಲಿಂಗಾಪುರದಲ್ಲಿ ನೇಣು ಬಿಗಿದುಕೊಂಡು ಪ್ರೇಮಕುಮಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಸಂಬಂಧ ಮೃತಳ ತಾಯಿ ಮಂಜುಳಾ ಕಿಕ್ಕೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಮೃತಳ ಶವವನ್ನು ಪಂಚನಾಮೆ ನಡೆಸಿ ವಾರಸುದಾರರಿಗೆ ಪೊಲೀಸರು ಒಪ್ಪಿಸಿದ್ದಾರೆ. ಕಿಕ್ಕೇರಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.