ದರ್ಶನ್‌ ಪಾರು ಮಾಡಲು ಯತ್ನಿಸಿದ್ದ ಪಟ್ಟಣಗೆರೆ ವಿನಯ್‌!

| Published : Jun 14 2024, 01:09 AM IST / Updated: Jun 14 2024, 09:00 AM IST

kannada actor darshan thoogudeepa
ದರ್ಶನ್‌ ಪಾರು ಮಾಡಲು ಯತ್ನಿಸಿದ್ದ ಪಟ್ಟಣಗೆರೆ ವಿನಯ್‌!
Share this Article
  • FB
  • TW
  • Linkdin
  • Email

ಸಾರಾಂಶ

‘ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ಎರಡೂವರೆ ಲಕ್ಷ ರು. ಹಣಕಾಸು ವಿಚಾರವಾಗಿ ನನ್ನ ಪರಿಚಿತ ಹುಡುಗರು ಕೊಲೆ ಮಾಡಿದ್ದಾರೆ. ಠಾಣೆಗೆ ಬಂದು ಅವರೇ ಶರಣಾಗುತ್ತಾರೆ’ ಎಂದು ನಟ ದರ್ಶನ್ ಆಪ್ತ ಪಟ್ಟಣಗೆರೆ ವಿನಯ್‌ ಕಾಮಾಕ್ಷಿಪಾಳ್ಯದ ಠಾಣೆ ಸಬ್ ಇನ್ಸ್‌ಪೆಕ್ಟರ್‌ಗೆ ಹೇಳಿದ್ದ ಸಂಗತಿ ಬೆಳಕಿಗೆ ಬಂದಿದೆ.

 ಬೆಂಗಳೂರು :  ‘ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ಎರಡೂವರೆ ಲಕ್ಷ ರು. ಹಣಕಾಸು ವಿಚಾರವಾಗಿ ನನ್ನ ಪರಿಚಿತ ಹುಡುಗರು ಕೊಲೆ ಮಾಡಿದ್ದಾರೆ. ಠಾಣೆಗೆ ಬಂದು ಅವರೇ ಶರಣಾಗುತ್ತಾರೆ’ ಎಂದು ನಟ ದರ್ಶನ್ ಆಪ್ತ ಪಟ್ಟಣಗೆರೆ ವಿನಯ್‌ ಕಾಮಾಕ್ಷಿಪಾಳ್ಯದ ಠಾಣೆ ಸಬ್ ಇನ್ಸ್‌ಪೆಕ್ಟರ್‌ಗೆ ಹೇಳಿದ್ದ ಸಂಗತಿ ಬೆಳಕಿಗೆ ಬಂದಿದೆ.

ಹತ್ಯೆ ಕೃತ್ಯದಲ್ಲಿ ದರ್ಶನ್‌ ಅವರನ್ನು ಪಾರು ಮಾಡಲು ಅವರ ಆಪ್ತರು ಯತ್ನಿಸಿದ್ದರು. ಈ ಸಂಚಿನ ಭಾಗವಾಗಿ ಚಿತ್ರದುರ್ಗ ಜಿಲ್ಲೆಯ ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ಗಿರಿನಗರ ಸಮೀಪದ ಚಾಮುಂಡಿ ನಗರದ ಕಾರ್ತಿಕ್ ಅಲಿಯಾಸ್ ಕಪ್ಪೆ, ಹೀರಣ್ಣನ ಗುಡ್ಡದ ಕೇಶವಮೂರ್ತಿ ಹಾಗೂ ಬನ್ನೇರುಘಟ್ಟ ರಸ್ತೆಯ ಕೆಂಬತ್ತನಹಳ್ಳಿಯ ನಿಖಿಲ್‌ ನಾಯಕ್‌ ಶರಣಾಗಿದ್ದರು. ಈ ಶರಣಾಗತಿ ಹಿಂದೆ ಪಟ್ಟಣಗೆರೆ ವಿನಯ್ ಪ್ರಮುಖ ಪಾತ್ರವಹಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಹಳ ದಿನಗಳಿಂದ ತನಗೆ ಪರಿಚಯವಿದ್ದ ಕಾಮಾಕ್ಷಿಪಾಳ್ಯ ಠಾಣೆ ಪಿಎಸ್‌ಐ ಅವರಿಗೆ ಸೋಮವಾರ ಸಂಜೆ ವಿನಯ್ ಕರೆ ಮಾಡಿದ್ದ. ಆಗ 2.5 ಲಕ್ಷ ರು. ಹಣಕಾಸು ವಿಚಾರವಾಗಿ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ಹುಡುಗರು ಕೊಲೆ ಮಾಡಿದ್ದಾರೆ. ಈಗ ನಿಮ್ಮ ಮುಂದೆ ಹುಡುಗರು ಸರೆಂಡರ್ ಆಗುತ್ತಾರೆ ಎಂದಿದ್ದ. ಈ ಮಾತಿಗೆ ಪಿಎಸ್‌ಐ ಒಪ್ಪಿದ ಬಳಿಕ ಕಾಮಾಕ್ಷಿಪಾಳ್ಯ ಠಾಣೆಗೆ ದರ್ಶನ್‌ನ ನಾಲ್ವರು ಸಹಚರರು ಬಂದು ಶರಣಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಬ್‌ನಲ್ಲಿದ್ದ ದರ್ಶನ್‌:

ಚಿತ್ರದುರ್ಗದಿಂದ ಆರ್‌.ಆರ್‌. ನಗರಕ್ಕೆ ಶನಿವಾರ ಮಧ್ಯಾಹ್ನ ರೇಣುಕಾಸ್ವಾಮಿಯನ್ನು ಕರೆತಂದ ವೇಳೆ ಪಬ್‌ವೊಂದರಲ್ಲಿ ದರ್ಶನ್‌ ಊಟ ಮಾಡುತ್ತಿದ್ದರು. ಆಗ ಅವರಿಗೆ ರಾಘವೇಂದ್ರ ಕರೆ ಮಾಡಿ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತಂದಿದ್ದಾಗಿ ಹೇಳಿದ್ದ. ಪಬ್‌ನಿಂದ ಹೊರಟು ಪವಿತ್ರಾಗೌಡ ಮನೆಗೆ ತೆರಳಿದ ದರ್ಶನ್‌, ತನ್ನ ಪ್ರಿಯತಮೆಯನ್ನು ಕರೆದುಕೊಂಡು ಶೆಡ್‌ಗೆ ಹೋಗಿದ್ದರು. ಆಗ ಪವಿತ್ರಾಗೌಡ ಸಮ್ಮುಖದಲ್ಲೇ ರೇಣುಕಾಸ್ವಾಮಿಗೆ ಹಲ್ಲೆ ನಡೆಸಿ ತೆರಳಿದ್ದರು ಎಂದು ಮೂಲಗಳು ಹೇಳಿವೆ.