ಅಥರ್ವ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ | Kannada Prabha
Image Credit: KP
ಕನ್ನಡ ಹಾಗೂ ತೆಲುಗಿನಲ್ಲಿ ತೆರೆ ಕಾಣಲಿರುವ ಅಥರ್ವ ಚಿತ್ರದ ಟ್ರೇಲರ್ ಬಿಡುಗಡೆ ಇತ್ತೀಚೆಗೆ ನಡೆಯಿತು. ಕಾರ್ತಿಕ್ ರಾಜು ನಟನೆಯ ಸಿನಿಮಾ.
ಕನ್ನಡಪ್ರಭ ಸಿನಿವಾರ್ತೆ ‘ಮನೆ ದೇವ್ರು’, ‘ಹಾಲುಂಡ ತವರು’, ‘ಕರುಳಿನ ಕೂಗು’ ಸಿನಿಮಾಗಳನ್ನು ನಿರ್ಮಿಸಿದ್ದ ಆಂಧ್ರ ಮೂಲದ ನಿರ್ಮಾಪಕ ವೈಜಾಕ್ ರಾಜು ಪುತ್ರ ಕಾರ್ತಿಕ್ ರಾಜು ‘ಅಥರ್ವ’ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಯಿತು. ಮಹೇಶ್ ರೆಡ್ಡಿ ನಿರ್ದೇಶನ, ಸುಭಾಷ್ ನೂತಲಪಾಟಿ ನಿರ್ಮಾಣದ ಚಿತ್ರವಿದು. ನಿರ್ಮಾಪಕ ಮಾರ್ಸ್ ಸುರೇಶ್ ಈ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಯಾವುದೇ ಒಂದು ಕ್ರೈಮ್ ನಡೆದಾಗ ಪ್ರಮುಖ ಪಾತ್ರ ವಹಿಸುವ ಕ್ಲೂಸ್ ಡಿಪಾರ್ಟ್ಮೆಂಟ್ ಮುಖ್ಯಸ್ಥನಾಗಿ ಚಿತ್ರದ ನಾಯಕ ಕಾರ್ತಿಕ್ ರಾಜು ಕಾಣಿಸಿಕೊಂಡಿದ್ದು, ಪತ್ರಕರ್ತೆ ಪಾತ್ರದಲ್ಲಿ ಸಿಮ್ರಾನ್ ನಟಿಸಿದ್ದಾರೆ. ‘ನಾನು ಪುನೀತ್ ರಾಜ್ಕುಮಾರ್ ಅವರ ವೀರ ಕನ್ನಡಿಗ ಚಿತ್ರದಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದೇನೆ. ಚಿಕ್ಕ ಹುಡುಗನಾಗಿದ್ದಾಗ ಉಪೇಂದ್ರ ಹಾಗೂ ಡಾ ವಿಷ್ಣುವರ್ಧನ್ ಮುಂದೆ ಏನ್ ಆಗ್ತಿಯಾ ಅಂತ ಕೇಳಿದಾಗ ಹೀರೋ ಆಗ್ತೀನಿ ಅಂತ ಹೇಳಿದ್ನಂತೆ. ಈಗ ನಟನಾಗಿ ನಿಮ್ಮ ಮುಂದೆ ಬಂದಿದ್ದೇನೆ’ ಎಂದು ಕಾರ್ತಿಕ್ ರಾಜು ಹೇಳಿಕೊಂಡರು.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.