ಇದೀಗ ‘ಡೆವಿಲ್‌’ ಸಿನಿಮಾ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳುವ ಮೂಲಕ ವಿಜಯಲಕ್ಷ್ಮೀ ದರ್ಶನ್‌ ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ದರ್ಶನ್‌ ಜೈಲಿಂದ ಹೊರಬರುವ ತನಕ ಅವರ

 ಸಿನಿವಾರ್ತೆ

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಬೇಲ್ ರದ್ದಾಗಿ ಜೈಲುವಾಸ ಖಾಯಂ ಆದ ಬಳಿಕ ‘ಡೆವಿಲ್’ ಸಿನಿಮಾ ರಿಲೀಸ್‌ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಚಿತ್ರದ ಪ್ರಚಾರದ ಭಾಗವಾಗಿ ಬಿಡುಗಡೆಯಾಗಬೇಕಿದ್ದ ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಹಾಡು ರಿಲೀಸ್‌ ಅನ್ನು ಚಿತ್ರತಂಡ ಮುಂದೂಡಿತು. ಇದನ್ನು ನೋಡಿದ ಜನ ‘ಡೆವಿಲ್’ ನಿಗದಿತ ಸಮಯಕ್ಕೆ ಬಿಡುಗಡೆ ಆಗುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಇದೀಗ ‘ಡೆವಿಲ್‌’ ಸಿನಿಮಾ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳುವ ಮೂಲಕ ವಿಜಯಲಕ್ಷ್ಮೀ ದರ್ಶನ್‌ ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ದರ್ಶನ್‌ ಜೈಲಿಂದ ಹೊರಬರುವ ತನಕ ಅವರ ಸೋಷಲ್‌ ಮೀಡಿಯಾವನ್ನು ತಾನೇ ನಿಭಾಯಿಸುವುದರ ಜೊತೆಗೆ ‘ಡೆವಿಲ್‌’ ಪ್ರಚಾರಕ್ಕೂ ಮುಂದಾಗಿರುವುದಾಗಿ ತಿಳಿಸಿದ್ದಾರೆ. ,

ಈ ಬಗ್ಗೆ ಬರೆದುಕೊಂಡಿರುವ ವಿಜಯಲಕ್ಷ್ಮೀ, ‘ಪ್ರೀತಿಯ ಡಿ ಬಾಸ್‌ ಸೆಲೆಬ್ರಿಟಿಗಳೇ, ನಿಮ್ಮ ಚಾಲೆಂಜಿಂಗ್ ಸ್ಟಾರ್ ನಿಮ್ಮನ್ನೆಲ್ಲ ತಮ್ಮ ಹೃದಯದಲ್ಲಿಟ್ಟುಕೊಂಡಿದ್ದಾರೆ. ಅವರು ಮರಳಿ ಬಂದು ನಿಮ್ಮನ್ನೆಲ್ಲ ಮುಖತಃ ಭೇಟಿ ಮಾಡುವವರೆಗೆ ನಾನೇ ಅವರ ಸೋಷಲ್‌ ಮೀಡಿಯಾವನ್ನು ನಿಭಾಯಿಸುತ್ತೇನೆ. ದರ್ಶನ್‌ ಪರವಾಗಿ ಡೆವಿಲ್‌ ಸಿನಿಮಾ ಬಗ್ಗೆ ಅಪ್‌ಡೇಟ್ಸ್ ನೀಡುವ ಜೊತೆಗೆ ಚಿತ್ರದ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ದರ್ಶನ್‌ಗಾಗಿ ನೀವು ನೀಡುತ್ತಿರುವ ಪ್ರೀತಿ, ಪ್ರಾರ್ಥನೆ, ಸಹನೆ ದರ್ಶನ್‌ ಹಾಗೂ ನಮ್ಮ ಕುಟುಂಬಕ್ಕೆ ಬಲ ನೀಡಿದೆ. ನಿಮ್ಮೆಲ್ಲರ ಪ್ರೀತಿಯ ದರ್ಶನ್ ಅದೇ ಚೈತನ್ಯ ಹಾಗೂ ಪ್ರೀತಿಯೊಂದಿಗೆ ಬೇಗ ಹೊರಬರಲೆಂದು ಆಶಿಸೋಣ’ ಎಂದು ಅಭಿಮಾನಿಗಳ ಸಹಕಾರವನ್ನು ಕೋರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಾವಿರಾರು ಅಭಿಮಾನಿಗಳು ವಿಜಯಲಕ್ಷ್ಮೀ ಅವರ ಪರ ನಿಲ್ಲುವ ಭರವಸೆ ನೀಡಿದ್ದಾರೆ.