ಸಾರಾಂಶ
- ಫೆ.23ಕ್ಕೆ ಚಿತ್ರ ಬಿಡುಗಡೆ
ಕನ್ನಡಪ್ರಭ ಸಿನಿವಾರ್ತೆ‘ನಿರ್ದೇಶಕ ಸಾಯಿರಾಂ ಅವರ ಮನೆಗೆ ಹೋಗಿದ್ದಾಗ ಅವರ ತಾಯಿ ತನ್ನ ಮಗನಿಗೆ ಸಿನಿಮಾಗಳಲ್ಲಿ ಸರಿಯಾದ ಅವಕಾಶ ಸಿಗುತ್ತಿಲ್ಲ. ಆತನ ಒದ್ದಾಟ ತನ್ನಿಂದ ನೋಡಲಾಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದರು. ಆಗಲೇ ಸಾಯಿರಾಂ ಅವರಿಗಾಗಿ ಸಿನಿಮಾ ನಿರ್ಮಿಸಬೇಕು ಅಂದುಕೊಂಡೆ. ಅದು ಇಂದು ಸಾಧ್ಯವಾಗಿದೆ. ಒಂದು ರೀತಿಯಲ್ಲಿ ತಾಯಿಯಿಂದಾಗಿ ಸಾಯಿರಾಂ ಅವರಿಗೆ ಜೀವ, ಜೀವನ ಎರಡೂ ಸಿಕ್ಕಂತಾಗಿದೆ’ ಎಂದು ‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾ ನಿರ್ಮಾಪಕ ಆನಂದ್ ಬಾಬು ಹೇಳಿದ್ದಾರೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇಂಥದ್ದೊಂದು ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಫೆ.23ಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ.ಈ ವೇಳೆ ಮಾತನಾಡಿದ ನಿರ್ದೇಶಕ ಸಾಯಿರಾಂ, ‘ಬಹಳ ಸೂಕ್ಷ್ಮ ವಿಚಾರ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಈ ಸಮಕಾಲಿನ ಕಥಾಹಂದರದ ಚಿತ್ರದಲ್ಲಿ ಅಸ್ತಿತ್ವ, ಅಸ್ಮಿತೆ ಹಾಗೂ ಸಮಾನತೆ ಕುರಿತ ಅಂಶಗಳು ಪ್ರಧಾನವಾಗಿವೆ. ಇದು ನೈಜ ಘಟನೆ ಆಧರಿತ ಚಿತ್ರ’ ಎಂದರು. ನಾಯಕ ವಿವಾನ್, ಪುನೀತ್ ರಾಜ್ಕುಮಾರ್ ಅವರ ಒಡನಾಟ ನೆನೆಸಿಕೊಂಡು ಭಾವುಕರಾದರು. ನಾಯಕಿ ಅನುಷಾ ರೈ, ‘ನಾಯಕನಿಗೆ ಬಂದೂಕು ಹಿಡಿಯಲು ಟ್ರೈನಿಂಗ್ ಕೊಡುವ ಡೇರಿಂಗ್, ಡ್ಯಾಶಿಂಗ್ ಪಾತ್ರ ನನ್ನದು. ಹಳ್ಳಿಯ ನೇಟಿವಿಟಿಯಲ್ಲಿ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ’ ಎಂದರು. ಖಳ ನಟ ಯಶ್ ಶೆಟ್ಟಿ ಸಿನಿಮಾ ತಂಡದ ಪ್ರಯತ್ನವನ್ನು ಪ್ರಶಂಸಿಸಿದರು. ಕಲಾವಿದರಾದ ಪ್ರದೀಪ್ ಪೂಜಾರಿ, ವರದನ್, ರಾಮ್ ಪವನ್, ಛಾಯಾಗ್ರಾಹಕ ರವಿ ಕುಮಾರ್ ಸನ ಮೊದಲಾದವರು ಹಾಜರಿದ್ದರು.