ಸಾರಾಂಶ
ಇಂಥ ಕುತೂಹಲಕಾರಿ ಕತೆಗೆ ಕಿರಣ್, ಚೇತನ್ ಎಸ್ ಪಿ ಅವರ ಜಂಟಿ ನಿರ್ದೇಶನ, ಸುಕೃತ ವಾಗ್ಲೆ ಅವರ ಸೈಲೆನ್ಸ್ ಆ್ಯಕ್ಟಿಂಗ್, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಅವರ ಕಿಲ್ಲಿಂಗ್ ಪ್ಲಾನ್ ಮತ್ತು ಸಂಕಲನಕಾರನ ಚುರುಕುತನ, ಬಿಗಿಯಾದ ಚಿತ್ರಕಥೆಯೇ ಪ್ಲಸ್ ಪಾಯಿಂಟ್.
ಚಿತ್ರ: ಕಪಟಿ
ತಾರಾಗಣ: ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್, ಶಂಕರ್ ನಾರಾಯಣ, ನಂದಗೋಪಾಲ್, ಅಜಿತ್ ಕುಮಾರರ್
ನಿರ್ದೇಶನ: ಕಿರಣ್, ಚೇತನ್ ಎಸ್ ಪಿ
ರೇಟಿಂಗ್ : 3
ಆರ್.ಕೇಶವಮೂರ್ತಿ
ಕನ್ನಡದ ಮಟ್ಟಿಗೆ ಇದೊಂದು ಹೊಸ ರೀತಿಯ ಕಥೆಯನ್ನು ಹೇಳುತ್ತಿದೆ... ಸಿನಿಮಾ ಶುರುವಾದ ಐದಾರು ನಿಮಿಷಗಳಿಗೆ ಪ್ರೇಕ್ಷಕ ಇಂಥದ್ದೊಂದು ನಿರ್ಧಾರಕ್ಕೆ ಬರುತ್ತಾನೆ. ಅಪ್ಡೇಟೆಡ್ ಜಗತ್ತಿನ ಅಪ್ಡೇಟ್ ಆಗಿರುವ ಕತೆಯನ್ನು ತೆರೆ ಮೇಲೆ ತಂದು ತಾಂತ್ರಿಕತೆ, ಇಂಟರ್ನೆಟ್, ಈಗಿನ ಜನರೇಷನ್, ಅವರ ಆಸೆ ಮತ್ತು ದುರಾಸೆಗಳನ್ನು ಅತ್ಯಂತ ನಿರೂಪಿಸುತ್ತಾ ಸಾಗುತ್ತದೆ ‘ಕಪಟಿ’ ಸಿನಿಮಾ.ಆರಂಭದಲ್ಲಿ ಈ ಮನೆಯಲ್ಲಿ ದೆವ್ವ ಇದೆ ಎನ್ನುವ ಅನುಮಾನ ಮೂಡಿಸುತ್ತದೆ. ಹಾಗಾದರೆ ಈ ದೆವ್ವ ಅಥವಾ ಆತ್ಮ ಯಾರದ್ದು, ಇಲ್ಲಿ ಯಾರ ಕೊಲೆ ನಡೆದಿರಬಹುದು ಎನ್ನುವ ತರ್ಕದಲ್ಲಿದ್ದಾಗಲೇ ಇದು ಇಂಟ್ನೆಟ್ನ ಕರಾಳತೆ ಎನ್ನುವ ಅಚ್ಚರಿ ವಿಷಯವನ್ನು ತೆರೆದಿಡುತ್ತದೆ. ಈಗ ಆ ಮನೆಯಲ್ಲಿರುವ ಮೂವರ ಕತೆ ಏನು ಎನ್ನುವ ಆತಂಕ ಹುಟ್ಟಿಸುತ್ತದೆ. ಹೀಗೆ ಪ್ರತಿ ದೃಶ್ಯಕ್ಕೂ ಭಯ, ಆತಂಕ, ಕುತೂಹಲದ ನೆರಳು ಆವರಿಸಿಕೊಳ್ಳುತ್ತಾ ಸಾಗುತ್ತದೆ.
ಕಾಸ್ಟ್ಯೂಮ್ ಡಿಸೈನರ್ ಆಗಿರುವ ಕೀರ್ತಿ, ಕ್ರಿಕೆಟರ್ ಆಗಬೇಕೆಂದು ಕನಸು ಕಂಡು, ಕೊನೆಗೆ ಹಾಸಿಗೆ ಹಿಡಿದಿರುವ ಅಮಿತ್, ಕುಡಿತಕ್ಕೆ ದಾಸನಾಗಿರುವ ಇವರ ತಂದೆ. ಈ ಮೂರು ಪಾತ್ರಧಾರಿಗಳ ಸುತ್ತಾ ಬೇಬಿ ಸುಮನ್, ಜುಟ್ಟು ಚಕ್ರಿ ಡಾರ್ಕ್ ವೆಬ್ಸೈಟ್ನ ಕರಾಳತೆಯಲ್ಲಿ ಬೀಳಿಸುತ್ತಾರೆ. ಈ ಮನೆಯಲ್ಲಿರುವ ಪಾತ್ರಧಾರಿಗಳ ಖಾಸಗಿ ಜೀವನ ಅವರ ಕೈಯಲ್ಲಿ ಇಲ್ಲ. ಅವರ ಪ್ರತಿ ಹೆಜ್ಜೆಯೂ ರೆಕಾರ್ಡ್ ಆಗುತ್ತಿದೆ. ಇದರಿಂದ ಯಾರಿಗೆ ಮತ್ತು ಹೇಗೆ ಲಾಭ ಎನ್ನುವ ಅಘಾತಕಾರಿ ಸಂಗತಿ ತಿಳಿಯುವ ಹೊತ್ತಿಗೆ ಗಾಢವಾದ ಭಯವೊಂದು ನೋಡಗರನ್ನು ಎಚ್ಚರಿಸಿ ಹೋಗುತ್ತದೆ.
ಅಧುನಿಕತೆ ಎಂಬುದು ಯಾರ ಕೈಯಲ್ಲಿ ಏನೆಲ್ಲ ಅನಾಹುತಗಳನ್ನು ಮಾಡಿಸುತ್ತದೆ, ನಮಗೇ ಗೊತ್ತಿಲ್ಲದೆ ನಾವು ಯಾರದ್ದೋ ಕ್ಯಾಮೆರಾ ಕಣ್ಣಿನಲ್ಲಿ ಅರೆಸ್ಟ್ ಆಗಿರುತ್ತೇವೆ ಎನ್ನುವ ಎಚ್ಚರಿಕೆ ಸಂದೇಶ ಈ ಚಿತ್ರ ನೀಡುತ್ತದೆ. ಇಂಥ ಕುತೂಹಲಕಾರಿ ಕತೆಗೆ ಕಿರಣ್, ಚೇತನ್ ಎಸ್ ಪಿ ಅವರ ಜಂಟಿ ನಿರ್ದೇಶನ, ಸುಕೃತ ವಾಗ್ಲೆ ಅವರ ಸೈಲೆನ್ಸ್ ಆ್ಯಕ್ಟಿಂಗ್, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಅವರ ಕಿಲ್ಲಿಂಗ್ ಪ್ಲಾನ್ ಮತ್ತು ಸಂಕಲನಕಾರನ ಚುರುಕುತನ, ಬಿಗಿಯಾದ ಚಿತ್ರಕಥೆಯೇ ಪ್ಲಸ್ ಪಾಯಿಂಟ್. ಥ್ರಿಲ್ಲಿಂಗ್ ಪ್ರಿಯರ ಬಹು ಮೆಚ್ಚಿನ ಚಿತ್ರವಾಗುತ್ತದೆ.