ಸಾರಾಂಶ
ಗೌರಿಶಂಕರ್ ನಟನೆಯ ಕೆರೆಬೇಟೆ ಸಿನಿಮಾ ಈ ವಾರದಿಂದ ಮರು ಬಿಡುಗಡೆ ಆಗುತ್ತಿದೆ.
ಕನ್ನಡಪ್ರಭ ಸಿನಿವಾರ್ತೆ
ಗೌರಿಶಂಕರ್ ನಟನೆಯ ‘ಕೆರೆಬೇಟೆ’ ಸಿನಿಮಾ ಈ ವಾರದಿಂದ ಮರು ಬಿಡುಗಡೆ ಆಗುತ್ತಿದೆ. ಮಾರ್ಚ್ 15ಕ್ಕೆ ತೆರೆಕಂಡಿದ್ದ ಈ ಚಿತ್ರವನ್ನು ನೋಡಿದವರು ಮೆಚ್ಚಿಕೊಂಡಿದ್ದರು. ಮಾಧ್ಯಮಗಳಲ್ಲೂ ಒಳ್ಳೆಯ ವಿಮರ್ಶೆಗಳು ಬಂದವು. ಆದರೆ, ಸಿನಿಮಾ ಹೆಚ್ಚು ಜನಕ್ಕೆ ತಲುಪಲಿಲ್ಲ. ಚಿತ್ರಮಂದಿರಗಳ ಸಮಸ್ಯೆ ಎದುರಾಯಿತು. ಅಲ್ಲದೆ ನಾಲ್ಕೈದು ಚಿತ್ರಗಳ ನಡುವೆ ‘ಕೆರೆಬೇಟೆ’ ಸಿನಿಮಾ ಥಿಯೇಟರ್ಗಳಿಗೆ ಬಂದಿತು. ಹೀಗಾಗಿ ಮತ್ತೊಮ್ಮೆ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಹೆಚ್ಚು ಜನಕ್ಕೆ ಚಿತ್ರವನ್ನು ತಲುಪಿಸುವ ಸಾಹಸಕ್ಕೆ ಮುಂದಾಗಿದೆ ಚಿತ್ರತಂಡ.ರಾಜ್ಗುರು ನಿರ್ದೇಶಿಸಿ, ಜೈಶಂಕರ್ಪಾಟೀಲ್ ನಿರ್ಮಿಸಿರುವ ಈ ಚಿತ್ರವು ಈ ವಾರದಿಂದ ಬೆಂಗಳೂರಿನ ಓರಾಯನ್ ಮಾಲ್, ಜಿಟಿ ಮಾಲ್ ಹಾಗೂ ಕನಕಪುರ ಫೋರಂನಲ್ಲಿ ಮರು ಬಿಡುಗಡೆ ಆಗಿದೆ. ‘ಹುಚ್ಚು ಪ್ರಯತ್ನದಲ್ಲಿ ನನ್ನ ಇನ್ನೊಂದು ಹುಚ್ಚು ಪ್ರಯತ್ನವಿದು. ಏನೋ ಮಿರಾಕಲ್ ಆಗಬಹುದು ಎನ್ನುವ ಭರವಸೆಯೊಂದಿಗೆ ಮತ್ತೊಮ್ಮೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇನೆ. ದುಡ್ಡು, ಸೋಲು ಇವೆಲ್ಲವಕ್ಕಿಂತಲೂ ಹೆಚ್ಚಾಗಿ ಒಳ್ಳೆಯ ಚಿತ್ರವನ್ನು ಹೆಚ್ಚು ಜನ ನೋಡುವಂತಾಗಲಿ ಎನ್ನುವ ಕಾರಣಕ್ಕೆ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ’ ಎಂಬುದು ಗೌರಿಶಂಕರ್ ಮಾತು.