ಸಾರಾಂಶ
‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ 25 ದಿನಗಳ ಯಶಸ್ವಿ ಪ್ರದರ್ಶನ ಪೂರೈಸಿದ ಸಂಭ್ರಮದಲ್ಲಿದೆ. ಇನ್ನೊಂದೆಡೆ ಚಿತ್ರದ ಗೆಲುವಿನ ಓಟ ಮುಂದುವರಿದಿದೆ. ಈ ಖುಷಿಗೆ ಚಿತ್ರತಂಡ ಇತ್ತೀಚೆಗೆ ಬೆಂಗಳೂರಿನ ಪ್ರಸನ್ನ ಥಿಯೇಟರ್ನಲ್ಲಿ ಸಂಭ್ರಮಾಚಾರಣೆ ನಡೆಸಿತು.
ಸಿನಿವಾರ್ತೆ : ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ 25 ದಿನಗಳ ಯಶಸ್ವಿ ಪ್ರದರ್ಶನ ಪೂರೈಸಿದ ಸಂಭ್ರಮದಲ್ಲಿದೆ. ಇನ್ನೊಂದೆಡೆ ಚಿತ್ರದ ಗೆಲುವಿನ ಓಟ ಮುಂದುವರಿದಿದೆ. ಈ ಖುಷಿಗೆ ಚಿತ್ರತಂಡ ಇತ್ತೀಚೆಗೆ ಬೆಂಗಳೂರಿನ ಪ್ರಸನ್ನ ಥಿಯೇಟರ್ನಲ್ಲಿ ಸಂಭ್ರಮಾಚಾರಣೆ ನಡೆಸಿತು.
ಈ ವೇಳೆ ಮಾತನಾಡಿದ ನಟ ಗಣೇಶ್, ‘ಸಿನಿಮಾದ ಯಶಸ್ಸಿನ ಸಿಂಹಪಾಲು ನಿರ್ದೇಶಕ ಶ್ರೀನಿವಾಸರಾಜು ಅವರಿಗೆ ಸೇರಬೇಕು’ ಎನ್ನುತ್ತಾ ತಾನು ತೊಟ್ಟ ಜಾಕೆಟ್ನ ಕಥೆ ಹೇಳಿದರು. ‘ಇತ್ತೀಚೆಗೆ ಈ ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ದುಬೈಗೆ ಹೋಗಿದ್ದೆವು. ಆ ವೇಳೆ ಶಾಪಿಂಗ್ ನಲ್ಲಿ ಒಂದು ಜಾಕೆಟ್ ಕಣ್ಣಿಗೆ ಬಿತ್ತು. ಅದರ ಮೇಲೆ ಜಿಎಫ್ ಎಂದು ಬರೆದಿತ್ತು. ಕೂಡಲೇ ಜೊತೆಗಿದ್ದ ರಂಗಾಯಣ ರಘು ಈ ಜಾಕೆಟ್ ತೆಗೆದಿಟ್ಟುಕೋ ಅಂದರು. ಯಾಕೆ ಅಂದರೆ, ಜಿಎಫ್ ಅಂದರೆ ಗೋಲ್ಡನ್ ಫ್ಯಾನ್ಸ್. ನಮ್ಮ ಸಿನಿಮಾದ 25ನೇ ದಿನದ ಸೆಲೆಬ್ರೇಶನ್ಗೆ ಈ ಜಾಕೆಟ್ ತೊಟ್ಟುಕೊಂಡು ಬರಬೇಕು. ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸಬೇಕು ಎಂದುಬಿಟ್ಟರು. ಹಾಗೆ ಈ ಜಾಕೆಟ್ ತೊಟ್ಟು ಬಂದಿದ್ದೇನೆ’ ಎಂದರು.
ನಿರ್ದೇಶಕ ಶ್ರೀನಿವಾಸ ರಾಜು, ‘ನನ್ನ ಸಿನಿಮಾ ಗೆಲುವಿಗೆ ಮೂರು ಮುಖ್ಯ ಪಿಲ್ಲರ್ಗಳು ಕಾರಣ. ಮೊದಲನೆಯದು ಚಿತ್ರರಸಿಕರು ಹಾಗೂ ಮಾಧ್ಯಮದವರು, ಎರಡನೆಯದು ನಾಯಕ ಗಣೇಶ್ ಹಾಗೂ ಮೂರನೆಯದು ಚಿತ್ರಕ್ಕೆ ಆರು ಹಿಟ್ ಹಾಡುಗಳನ್ನು ಕೊಟ್ಟ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಈ ಗೆಲುವನ್ನು ನನ್ನ ಇಡೀ ತಂಡಕ್ಕೆ ಅರ್ಪಿಸುತ್ತೇನೆ’ ಎಂದರು.