ಶ್ರೀಸಾಮಾನ್ಯನ ಕಥೆಗೆ ಮಾನವೀಯತೆಯ ಸ್ಪರ್ಶ : ಮಧ್ಯಮ ವರ್ಗದ ಲೈಫನ್ನು ಕಣ್ಮುಂದೆ ತರುವ ಸಿನಿಮಾ

| Published : Jul 20 2024, 12:47 AM IST / Updated: Jul 20 2024, 05:38 AM IST

Film theater

ಸಾರಾಂಶ

ಸಾಲದ ಬಡ್ಡಿ ಜೊತೆಗೆ ರೌಡಿಯ ಬೆದರಿಕೆಯೂ ಸೇರಿ ನಾಯಕನ ಜೀವ, ಜೀವನ ಕತ್ತಿ ಮೇಲಿನ ನಡಿಗೆಯಾಗಿದೆ. ಇಂಥವನ ಬದುಕಿನಲ್ಲಿ ಟರ್ನಿಂಗ್‌ ಪಾಯಿಂಟ್ ಹೇಗೆ ಬರುತ್ತೆ? ಮುಂದಿನ ಬೆಳವಣಿಗೆಗಳೇನು ಎಂಬುದು ಸಿನಿಮಾದ ಕಥೆ.

ಚಿತ್ರ : ನಾಟ್‌ ಔಟ್‌ ಸಿನಿಮಾ

ತಾರಾಗಣ: ಅಜಯ್‌ ಪ್ರಥ್ವಿ, ರಚನಾ ಇಂದರ್‌, ರವಿಶಂಕರ್‌, ಕಾಕ್ರೋಚ್‌ ಸುಧಿ

ನಿರ್ದೇಶನ: ಅಂಬರೀಶ್

ರೇಟಿಂಗ್‌ : 3

ಪ್ರಿಯಾ ಕೆರ್ವಾಶೆ

ಮಧ್ಯಮ ವರ್ಗದ ಲೈಫನ್ನು ಕಣ್ಮುಂದೆ ತರುವ ಸಿನಿಮಾ ಇದು. ಬದುಕು ಕಟ್ಟಿಕೊಳ್ಳಲು ಸಾಲ ಅನಿವಾರ್ಯ. ಆ ಅನಿವಾರ್ಯತೆ ಜೊತೆಗೆ ಅನ್ಯಾಯ ಬೋನಸ್‌. ಜೀವವಾ, ಮರ್ಯಾದೆಯಾ ಎಂಬ ಸ್ಥಿತಿ ಬಂದಾಗ ಇದು ಯುವಕರನ್ನು ಯಾವ ಎಕ್ಸ್‌ಟ್ರೀಮ್‌ಗೆ ಕರೆದೊಯ್ಯಬಹುದು ಎಂಬುದನ್ನು ಡಾರ್ಕ್‌ ಹ್ಯೂಮರ್‌ ಮೂಲಕ ಕಟ್ಟಿಕೊಡುವ ಯತ್ನ ಇಲ್ಲಿದೆ.

ನಾಯಕ ಅಜಯ್‌ ಆ್ಯಂಬ್ಯುಲೆನ್ಸ್‌ ಚಾಲಕ. ಸ್ವಂತ ಆ್ಯಂಬುಲೆನ್ಸ್‌ ತಗೊಳ್ಳೋದಕ್ಕೆ ಫೈನಾನ್ಶಿಯರ್‌ ಕಂ ರೌಡಿಯೊಬ್ಬನ ಬಳಿ ಸಾಲ ಮಾಡಿದ್ದಾನೆ. ಆದರೆ ಆ್ಯಂಬ್ಯುಲೆನ್ಸ್‌ ಕಳ್ಳತನವಾಗಿದೆ. ಸಾಲದ ಬಡ್ಡಿ ಜೊತೆಗೆ ರೌಡಿಯ ಬೆದರಿಕೆಯೂ ಸೇರಿ ಜೀವ, ಜೀವನ ಕತ್ತಿ ಮೇಲಿನ ನಡಿಗೆಯಾಗಿದೆ. ಇಂಥವನ ಬದುಕಿನಲ್ಲಿ ಟರ್ನಿಂಗ್‌ ಪಾಯಿಂಟ್ ಹೇಗೆ ಬರುತ್ತೆ? ಮುಂದಿನ ಬೆಳವಣಿಗೆಗಳೇನು ಎಂಬುದು ಸಿನಿಮಾದ ಕಥೆ.

ಗಮನ ಸೆಳೆಯುವುದು ಸಹಜವಾಗಿ ನಗೆಯುಕ್ಕಿಸುವ ಕಾಕ್ರೋಚ್‌ ಸುಧಿ ಮ್ಯಾನರಿಸಂ. ಅಜಯ್‌ ಪೃಥ್ವಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರವಿಶಂಕರ್‌ ಅರ್ಭಟ, ಗೋಪಾಲಕೃಷ್ಣ ದೇಶಪಾಂಡೆ ಅಸಹಾಯಕತೆ, ರೌಡಿ ಗ್ಯಾಂಗ್‌ನ ಕಾಮಿಡಿ ಚೆನ್ನಾಗಿ ಬಂದಿದೆ. ಎರಡನೇ ಭಾಗದ ಕಥೆಯ ಓಟ ಸಿನಿಮಾವನ್ನು ನೋಡೆಬಲ್‌ ಆಗಿಸುತ್ತದೆ. ಮಾನವೀಯತೆಯ ಸ್ಪರ್ಶ ಪರಿಣಾಮಕಾರಿಯಾಗಿದೆ. ಪ್ರೇಕ್ಷಕನ ಗಮನ ಬೇರೆಡೆಗೆ ಸೆಳೆಯಲು ಬರುವ ಪಾತ್ರಗಳೂ ಇಂಟರೆಸ್ಟಿಂಗ್‌ ಅನಿಸುತ್ತದೆ. ಸಣ್ಣ ಪುಟ್ಟ ಕೊರತೆ ಬಿಟ್ಟರೆ ನಿರ್ದೇಶಕ ಅಂಬರೀಶ್‌ ಹೆಚ್ಚಿನ ಗೊಂದಲವಿಲ್ಲದೆ ಕಥೆ ದಾಟಿಸಿದ್ದಾರೆ.