ಸಾರಾಂಶ
ಪತ್ರಕರ್ತ, ನಟ ಯತಿರಾಜ್ ನಿರ್ದೇಶನದ ಸತ್ಯಂ ಶಿವಂ ಸಿನಿಮಾ ತೆರೆಗೆ ಬಂದಿದ್ದು, ಸಾವು- ಬದುಕು ಇತ್ಯಾದಿಗಳ ಸುತ್ತ ಇಡೀ ಕತೆ ಸಾಗುತ್ತದೆ.
ಚಿತ್ರ:ಸತ್ಯಂ ಶಿವಂ
ತಾರಾಗಣ:ಯತಿರಾಜ್, ಬುಲೆಟ್ ರಾಜು, ಸಂಜನಾ, ಮುನಿ, ಅರವಿಂದ್ ರಾವ್, ಬಲರಾಜವಾಡಿ, ವೀಣಾ ಸುಂದರ್ನಿರ್ದೇಶನ:ಯತಿರಾಜ್- ಆರ್ಕೆಜೀವನದ ಸಂಕಷ್ಟಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವನು, ಜೀವ ತೆಗೆಯುವ ರೌಡಿ ಈ ಇಬ್ಬರ ಸುತ್ತ ಒಂದಿಷ್ಟು ಚರ್ಚಿತ ಅಂಶಗಳನ್ನು ತೆರೆ ಮೇಲೆ ತೋರುವ ಚಿತ್ರ ‘ಸತ್ಯಂ ಶಿವಂ’. ನಟನೆ ಜತೆಗೆ ನಿರ್ದೇಶನದ ಸಾರಥಿ ಆಗಿರುವ ಯತಿರಾಜ್ ಸಾವು ಮತ್ತು ಬದುಕಿನ ದಾರಿಗಳಲ್ಲಿ ನಿಂತು ಒಂದಿಷ್ಟು ಫಿಲಾಸಫಿಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಸುಪಾರಿ ತೆಗೆದುಕೊಂಡು ಕೊಲೆಗಳನ್ನು ಮಾಡುತ್ತಿರುವ ಕಾಳಿ ಅಡ್ಡೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ವಿಜಯ್ ಎನ್ನುವ ವ್ಯಕ್ತಿ ಬರುತ್ತಾನೆ. ಅವನನ್ನು ಈ ಕಾಳಿ ರಕ್ಷಣೆ ಮಾಡುತ್ತಾನೆ. ಇಷ್ಟಕ್ಕೂ ವಿಜಯ್ ಸಾಯಲು ಹೋಗಿದ್ದು ಯಾಕೆ, ಕೊಲ್ಲುವ ಕಾಳಿಯೇ ರಕ್ಷಣೆ ಮಾಡಿದ್ದು ಯಾಕೆ ಎಂಬುದು ಮುಂದಿನ ಕಥನ ಕುತೂಹಲ.ನಟರಾಗಿ ಗುರುತಿಸಿಕೊಂಡಿರುವ ನಿರ್ದೇಶಕ ಯತಿರಾಜ್ ತಮಗೆ ಇರುವ ಒಂದಿಷ್ಟು ಮಿತಿಗಳನ್ನು ತೋರುತ್ತಲೇ ಅವುಗಳನ್ನು ಮೀರಿ ಸಿನಿಮಾ ಮಾಡುವ ಸಾಹಸ ಮಾಡಿದ್ದಾರೆ. ಅವರ ಈ ಸಾಹಸಕ್ಕೆ ಪೋಷಕ ಪಾತ್ರಧಾರಿಗಳು ಜತೆಯಾಗಿದ್ದಾರೆ. ಬಲರಾಜವಾಡಿ, ಅರವಿಂದ್ ರಾವ್, ಸಂಜನಾ ಹಾಗೂ ಕೊಲೆಗಾರರಾಗುವ ಹುಡುಗರ ಗ್ಯಾಂಗಿನ ಪಾತ್ರಧಾರಿಗಳು ಚಿತ್ರದ ತೂಕವನ್ನು ಹೆಚ್ಚಿಸಿದ್ದಾರೆ. ‘ಸತ್ಯ ದಾರಿಯಲಿ ನಡೆದರೆ ಮೆಚ್ಚನಾ ಪರಮಾತ್ಮ’ ಎನ್ನುವ ಪ್ರಶ್ನೆಯನ್ನು ಉಳಿಸುತ್ತದೆ ಕಾಳಿ ಪಾತ್ರ. ಅದ್ದೂರಿ ಮೇಕಿಂಗ್, ತಾಂತ್ರಿಕತೆಯ ವೈಭವದ ಆಚೆಗೆ ನಿಲ್ಲುವ ಸಿನಿಮಾ.