ಪ್ರಾಯೋಜಕತ್ವ ಮೂಲಕ ಈ ಬಾರಿ ಸಾಂಪ್ರದಾಯಿಕ ದಸರಾ

| Published : Oct 11 2023, 12:45 AM IST

ಪ್ರಾಯೋಜಕತ್ವ ಮೂಲಕ ಈ ಬಾರಿ ಸಾಂಪ್ರದಾಯಿಕ ದಸರಾ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಯೋಜಕತ್ವ ಮೂಲಕ ಈ ಬಾರಿ ಸಾಂಪ್ರದಾಯಿಕ ದಸರಾ
- ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ - ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಅದ್ಧೂರಿ ದಸರಾ ಆಚರಣೆ ಇಲ್ಲ ಫೋಟೋ- 10ಎಂವೈಎಸ್1 ಮೈಸೂರು ಅರಮನೆ ಮಂಡಳಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿದರು. ಕೆ.ಎಂ. ಗಾಯತ್ರಿ, ರಮೇಶ್ ಬಾನೋತ್, ಸೀಮಾ ಲಾಟ್ಕರ್, ಜಿ.ಟಿ. ದಿನೇಶ್ ಕುಮಾರ್ ಇದ್ದರು ---- ಕನ್ನಡಪ್ರಭ ವಾರ್ತೆ ಮೈಸೂರು ರಾಜ್ಯದಲ್ಲಿ ಈ ಬಾರಿ ಬರ ಇರುವುದರಿಂದ ಅದ್ಧೂರಿ ದಸರಾ ಆಚರಣೆ ಬದಲಿಗೆ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು, ಮೈಸೂರಿನ ಪ್ರವಾಸೋದ್ಯಮ, ಆರ್ಥಿಕತೆಗೆ ತೊಂದರೆ, ಹಿನ್ನಡೆಯಾಗದಂತೆ ಪ್ರಾಯೋಜಕತ್ವದಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು. ಮೈಸೂರು ಅರಮನೆ ಮಂಡಳಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಅದ್ಧೂರಿ ದಸರಾ ಆಚರಣೆ ಮಾಡುತ್ತಿಲ್ಲ. ಜೊತೆಗೆ ಸರಳವೂ ಅಲ್ಲ. ಸಾಂಪ್ರದಾಯಿಕವಾಗಿ, ಪ್ರಾಯೋಜಕತ್ವದಲ್ಲಿ ಆಚರಿಸಲಾಗುತ್ತಿದೆ ಎಂದರು. ಹಲವು ಪ್ರಾಯೋಜಕರು ಮುಂದೆ ಬಂದಿದ್ದಾರೆ. ಎಷ್ಟು ಮಂದಿ ಪ್ರಾಯೋಜಕತ್ವ ಪಡೆಯುತ್ತಾರೆ ಎಂಬ ಮಾಹಿತಿ ಕೆಲ ದಿನಗಳಲ್ಲೇ ತಿಳಿಯುತ್ತದೆ. ಅವರು ಹೆಚ್ಚು ಸ್ಕ್ರೀನ್ ಸ್ಪೇಸ್ ಕೇಳುವುದರಿಂದ ನಮ್ಮ ಇತಿಮಿತಿಯಲ್ಲಿ, ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದಲೂ 15 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಎಂಡಿಎಯಿಂದ 10 ಕೋಟಿ, ಅರಮನೆ ಮಂಡಳಿಯಿಂದ 5 ಕೋಟಿ ರೂ. ಹಣ ಬಳಸಿಕೊಳ್ಳಲು ಪತ್ರ ಬರೆಯಲಾಗಿದೆ ಎಂದು ಅವರು ವಿವರಿಸಿದರು. ದಸರಾಗೆ ಜನರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸರಳ ದಸರಾ ಎಂದು ಚರ್ಚೆ ನಡೆದರೆ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಾರೆ. ಸರಳ ಎಂಬ ಪದ ಬಳಕೆ ಮಾಡುವುದರಿಂದ ಪ್ರವಾಸಿಗರು, ವ್ಯಾಪಾರಿಗಳಿಗೂ ತೊಂದರೆಯಾಗುತ್ತದೆ. ಹೀಗಾಗಿ ಸರಳ ದಸರಾ ಚರ್ಚೆ ಅನಗತ್ಯ ಎಂದರು. ಪ್ರವಾಸಿಗರಿಗೆ ತೆರಿಗೆ ವಿನಾಯಿತಿ ನೀಡಲು ಉನ್ನತ ಮಟ್ಟದ ಸಭೆಯಲ್ಲಿ ಪ್ರಸ್ತಾವನೆ ಮಾಡಲಾಗಿತ್ತು. ಮತ್ತೊಮ್ಮೆ ಪ್ರವಾಸೋದ್ಯಮ ಇಲಾಖೆಯ ಗಮನಕ್ಕೆ ತಂದು ನಿರ್ಧರಿಸಲಾಗುವುದು ಎಂದು ಅವರು ಹೇಳಿದರು. ಜಿಪಂ ಸಿಇಒ ಕೆ.ಎಂ. ಗಾಯತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಎಸ್ಪಿ ಸೀಮಾ ಲಾಟ್ಕರ್, ಎಂಡಿಎ ಆಯುಕ್ತ ಜಿ.ಟಿ. ದಿನೇಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಮೊದಲಾದವರು ಇದ್ದರು. ---- ಬಾಕ್ಸ್... 22, 23 ರಂದು ದಸರಾ ಏರ್ ಶೋ ಕೇಂದ್ರ ರಕ್ಷಣಾ ಇಲಾಖೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ದಸರಾ ವೈಮಾನಿಕ ಪ್ರದರ್ಶನವನ್ನು ಅ.23 ರಂದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದೆ. ಅ.22 ರಂದು ರಿಹರ್ಸಲ್ ನಡೆಯಲಿದ್ದು, ಅ.23ರ ಸಂಜೆ 4 ರಿಂದ 5 ರವರೆಗೆ ಮುಖ್ಯ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ತಿಳಿಸಿದರು. ಅ.23 ರಂದೇ ಪಂಜಿನ ಕವಾಯತು ರಿಹರ್ಸಲ್ ನಡೆಯುವುದರಿಂದ ಎರಡೂ ಕಾರ್ಯಕ್ರಮಕ್ಕೆ ಒಂದೇ ಪಾಸ್ ನೀಡಬೇಕೆ ಬೇಡವೇ ಎಂಬ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಇದರ ಜೊತೆಗೆ ಪ್ಯಾರಾ ಮೋಟರಿಂಗ್, ಹೆಲಿ ರೈಡ್ ಗೂ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು. ---- -- ಬಾಕ್ಸ್... -- ಆಕರ್ಷಕ ದಸರಾ ಜಂಬೂಸವಾರಿ-- ಈ ಬಾರಿ ದಸರಾ ಜಂಬೂಸವಾರಿ ಹಾಗೂ ಪಂಜಿನ ಕವಾಯತು ಆಕರ್ಷಕವಾಗಿರಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು. ಈ ಬಾರಿಯ ಜಂಬೂಸವಾರಿಯನ್ನು ಆಕರ್ಷಕವಾಗಿಸಲು ನಿರ್ಧರಿಸಿದ್ದು, ಚಿನ್ನದ ಅಂಬಾರಿ ಮುಂಭಾಗ 200 ಮಂದಿ ದರ್ಬಾರ್ ಸಮವಸ್ತ್ರ ಧರಿಸಿ ಸಾಗಲಿದ್ದಾರೆ. ಇದಕ್ಕಾಗಿ ಅರಮನೆ ಮಂಡಳಿಯಿಂದ ವಿಶೇಷ ಸಮವಸ್ತ್ರ ಸಿದ್ಧಪಡಿಸಲು ಟೆಂಡರ್ ನೀಡಲಾಗಿದೆ ಎಂದರು. ಎಲ್ಲಾ ಜಿಲ್ಲೆಗಳಿಂದಲೂ ಸ್ತಬ್ಧಚಿತ್ರಗಳು ಭಾಗವಹಿಸಲಿದ್ದು, ಕೆಲ ದಿನಗಳಲ್ಲಿ ಎಷ್ಟು ಸ್ತಬ್ಧಚಿತ್ರಗಳು ಪಾಲ್ಗೊಳ್ಳುತ್ತಿವೆ ಎಂಬ ಮಾಹಿತಿ ಸಿಗಲಿದೆ. 300 ಹೆಚ್ಚು ಕಲಾತಂಡಗಳು ಅರ್ಜಿ ಸಲ್ಲಿಸಿದ್ದು, ಎಷ್ಟು ತಂಡಗಳಿಗೆ ಅವಕಾಶ ನೀಡಬೇಕೆಂದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.