ಸಾರಾಂಶ
ಕೊಚ್ಚಿ: ಲೋಕಸಭಾ ಚುನಾವಣೆಗೂ ಮುನ್ನ ದೂರದರ್ಶನವು ‘ದ ಕೇರಳ ಲವ್ ಸ್ಟೋರಿ’ ಚಿತ್ರ ಪ್ರದರ್ಶನ ಮಾಡಿದ್ದಕ್ಕೆ ಕಾಂಗ್ರೆಸ್ ಮತ್ತು ಸಿಪಿಎಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಕೇರಳದಲ್ಲಿ ಪ್ರಭಾವಿಯಾಗಿರುವ ಚರ್ಚ್ಗಳಲ್ಲಿ ಇದೀಗ ಚಲನಚಿತ್ರ ಯುದ್ಧ ಆರಂಭವಾಗಿದೆ.
ಕೇರಳದಲ್ಲಿ ಸಾವಿರಾರು ಹಿಂದೂ ಮತ್ತು ಕ್ರೈಸ್ತ ಯುವತಿಯರನ್ನು ಲವ್ ಜಿಹಾದ್ ಮೂಲಕ ಇಸ್ಲಾಂಗೆ ಸೆಳೆದು ಅವರನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ತಳ್ಳುತ್ತಿರುವ ಅಂಶಗಳನ್ನು ಒಳಗೊಂಡ ‘ದ ಕೇರಳ ಲವ್ ಸ್ಟೋರಿ’ ಚಿತ್ರವನ್ನು ಸೋಮವಾರ ಕೆಲವು ಚರ್ಚ್ಗಳಲ್ಲಿ ಪ್ರದರ್ಶಿಸಲಾಗಿದೆ.
ವಿಶೇಷವೆಂದರೆ ಕ್ರೈಸ್ತ ಸಂಘಟನೆಗಳೇ ಈ ಪ್ರದರ್ಶನ ಆಯೋಜಿಸಿವೆ. 10,11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರವನ್ನು ತೋರಿಸಿ ಅದರ ಕುರಿತು ಸಣ್ಣ ಲೇಖನ ಬರೆಯಲು ಸೂಚಿಸಲಾಗಿದೆ. ಕಾನೂನಿನಲ್ಲಿನ ಕೆಲವೊಂದು ಲೋಪದೋಷಗಳನ್ನು ಬಳಸಿಕೊಂಡೇ ಕೆಲವೊಂದು ದುಷ್ಟಶಕ್ತಿಗಳು ಸಂಚು ರೂಪಿಸುತ್ತಿವೆ. ಇದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಹೀಗಾಗಿ ಈ ಚಿತ್ರದ ಮೂಲಕ ನಾವು ಯುವಸಮೂಹಲದಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸಂಘಟನೆ ಹೇಳಿದೆ.
ಮತ್ತೊಂದೆಡೆ ಕೆಲವು ಸಿರಿಯನ್ ಮಲಬಾರ್ ಚರ್ಚ್ಗಳಲ್ಲಿ ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಕಥಾಹಂದರವುಳ್ಳ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಗಿದೆ. ಎರ್ನಾಕುಲಂನಲ್ಲಿರುವ ಸಂಜೋಪುರಂ ಸೇಂಟ್ ಜೋಸೆಫ್ ಚರ್ಚ್ನಲ್ಲಿ 125 ಮಕ್ಕಳಿಗೆ ‘ಕ್ರೈ ಆಫ್ ದಿ ಆಪ್ರೆಸ್ಡ್’ ಸಾಕ್ಷ್ಯಚಿತ್ರ ತೋರಿಸಲಾಗಿದೆ.
ಈ ವೇಳೆ ಮಾತನಾಡಿದ ಫಾದರ್ ಜೇಮ್ಸ್ ಪನವೆಲಿಲ್, ‘ಕೇರಳ ಸ್ಟೋರಿಯಂತಹ ಚಿತ್ರಗಳು ಕೇವಲ ಒಂದು ಸಿದ್ಧಾಂತವನ್ನು ನಂಬಲು ಮತ್ತು ಅದನ್ನು ಬೆಂಬಲಿಸುವಂತೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗಿವೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಂತಹ ಚಿತ್ರಗಳನ್ನು ತೋರಿಸಿಲ್ಲ. ಬದಲಾಗಿ ಮಣಿಪುರದ ಗಲಭೆಯ ಕುರಿತು ಕಥಾಹಂದರವುಳ್ಳ ಸುಮಾರು 15 ನಿಮಿಷದ ಸಾಕ್ಷ್ಯಚಿತ್ರವನ್ನು ಸುಮಾರು 125 ಮಕ್ಕಳಿಗೆ ಪ್ರದರ್ಶಿಸಲಾಗಿದೆ’ ಎಂದು ತಿಳಿಸಿದರು.