ಸಾರಾಂಶ
ಯಾಂಗೂನ್: ಭಾರತದ ನೆರೆ ದೇಶ ಮ್ಯಾನ್ಮಾರ್ನಲ್ಲಿ (ಬರ್ಮಾ) ಮತ್ತೆ ಅಶಾಂತಿ ಉಲ್ಬಣಿಸಿದ್ದು 2017ರಲ್ಲಿ ಸಂಭವಿಸಿದ್ದ ಹಿಂದೂಗಳ ಹತ್ಯಾಕಾಂಡದ ಮಾದರಿಯ ಘಟನೆ ಪುನರಾವರ್ತನೆ ಆಗಬಹುದು ಎಂಬ ಭೀತಿ ಎದುರಾಗಿದೆ.
ಏಕೆಂದರೆ ದೇಶದ ಅರಕನ್ ರಾಜ್ಯದ ಬುತಿದುವಾಂಗ್ನಲ್ಲಿ ರೋಹಿಂಗ್ಯ ಉಗ್ರರು ಹಿಂದುಗಳು ಮತ್ತು ಬೌದ್ಧರ ಗುಂಪನ್ನು ಒತ್ತೆಯಾಳಾಗಿ ಇರಿಸಿಕೊಂಡಿವೆ.ರೋಹಿಂಗ್ಯದಂಥ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳು ಧರ್ಮದ ಆಧಾರದ ಮೇಲೆ ಜನಾಂಗೀಯ ಗುಂಪುಗಳನ್ನು ಕೊಲ್ಲಲು ಮತ್ತು ಭಯಭೀತಗೊಳಿಸಲು ಸೇನೆಯ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿವೆ.
ಇದರ ಭಾಗವಾಗಿ 1600ಕ್ಕೂ ಹೆಚ್ಚು ಹಿಂದೂಗಳು ಮತ್ತು 120ಕ್ಕೂ ಹೆಚ್ಚು ಬೌದ್ಧರನ್ನು ಒತ್ತೆ ಇರಿಸಿಕೊಂಡಿವೆ. ಬಂಧಿತರ ಮನೆಗಳನ್ನು ಲೂಟಿ ಮಾಡುತ್ತಿವೆ ಮತ್ತು ಸುಟ್ಟು ಹಾಕುತ್ತಿವೆ ಎಂದು ಮೂಲಗಳು ಹೇಳಿವೆ.
ಹಿಂಸೆಗೆ ಕಾರಣ ಏನು?:ಮ್ಯಾನ್ಮಾರ್ನಲ್ಲಿ ಕಳೆದ ವರ್ಷ ಸೇನೆಯಿಂದ ಬಂಡೆದ್ದು ‘ಅರಕನ್ ಆರ್ಮಿ’ ಎಂಬ ಗುಂಪು ಸೇನೆಯ ವಿರುದ್ಧವೇ ಬಂಡೆದ್ದು ಹೋರಾಟ ಆರಂಭಿಸಿದೆ. ಇದಕ್ಕೆ ಪ್ರತೀಕಾರವಾಗಿ ಸೇನೆಯು ತಾನೇ ಹುಟ್ಟು ಹಾಕಿದ ಅರಕನ್ ರೋಹಿಂಗ್ಯ ಸಾಲ್ವೇಶನ್ ಆರ್ಮಿ ಹಾಗೂ ಅರಕನ್ ರೋಹಿಂಗ್ಯ ಆರ್ಮಿ ಎಂಬ 2 ಸಂಘಟನೆಗಳನ್ನು ಎತ್ತಿಕಟ್ಟಿದೆ. ಇದರ ಪರಿಣಾಮ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ರೋಹಿಂಗ್ಯ ಮುಸ್ಲಿಂ ಸಂಘಟನೆಗಳು ದಾಳಿ ಆರಂಭಿಸಿವೆ.
2017ರಲ್ಲಿ ರೋಹಿಂಗ್ಯ ಉಗ್ರ ಗುಂಪುಗಳು ರಾಖೈನ್ ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 100 ಹಿಂದೂಗಳನ್ನು ಕಗ್ಗೊಲೆ ಮಾಡಿದ್ದವು.