ದಿಲ್ಲಿಯಲ್ಲಿ ಹಳಿ ತಪ್ಪಿದ ರೈಲು: ಯಾವುದೇ ಅನಾಹುತವಿಲ್ಲ

| Published : Jun 13 2025, 03:48 AM IST

ದಿಲ್ಲಿಯಲ್ಲಿ ಹಳಿ ತಪ್ಪಿದ ರೈಲು: ಯಾವುದೇ ಅನಾಹುತವಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿಯ ಶಿವಾಜಿ ಬ್ರಿಡ್ಜ್‌ನಲ್ಲಿ ರೈಲೊಂದು ಹಳಿ ತಪ್ಪಿದ ಘಟನೆ ಗುರುವಾರ ನಡೆದಿದೆ. ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್‌ (ಇಎಂಯು) ರೈಲು ಗಾಜಿಯಾಬಾದ್‌ನಿಂದ ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ತೆರಳುತ್ತಿದ್ದಾಗ ಸಂಜೆ 4.10 ರ ಸುಮಾರಿಗೆ ರೈಲು ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.

ನವದೆಹಲಿ: ದೆಹಲಿಯ ಶಿವಾಜಿ ಬ್ರಿಡ್ಜ್‌ನಲ್ಲಿ ರೈಲೊಂದು ಹಳಿ ತಪ್ಪಿದ ಘಟನೆ ಗುರುವಾರ ನಡೆದಿದೆ. ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್‌ (ಇಎಂಯು) ರೈಲು ಗಾಜಿಯಾಬಾದ್‌ನಿಂದ ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ತೆರಳುತ್ತಿದ್ದಾಗ ಸಂಜೆ 4.10 ರ ಸುಮಾರಿಗೆ ರೈಲು ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಘಟನೆ ನಡೆದು ಕೆಲ ಹೊತ್ತಿನ ಬಳಿಕ ಪುನಾರಂಭಗೊಂಡಿತು.

==

ಬಾಂಗ್ಲಾದಲ್ಲಿ ಟ್ಯಾಗೋರ್‌ ಪೂರ್ವಜರ ಮನೆ ಧ್ವಂಸ

ಜಾಗತಿಕ ಖಂಡನೆಗೆ ಬಿಜೆಪಿ ಆಗ್ರಹ

ನವದೆಹಲಿ: ನೊಬೆಲ್‌ ಪುರಸ್ಕೃತ ಸಾಹಿತಿ, ಭಾರತದ ರಾಷ್ಟ್ರಗೀತೆ ರಚಿಸಿದ ರವೀಂದ್ರನಾಥ್‌ ಟ್ಯಾಗೋರ್‌ ಅವರ ಬಾಂಗ್ಲಾದೇಶದಲ್ಲಿದ್ದ ಪೂರ್ವಜರ ಮನೆಯನ್ನು ಬಾಂಗ್ಲಾದೇಶದ ಇಸ್ಲಾಮಿಕ್‌ ಮುಲಭೂತವಾದಿಗಳು ಧ್ವಂಸಗೊಳಿಸಿದ್ದಾರೆ. ಜಮಾತೆ ಇಸ್ಲಾಮಿ ಮತ್ತು ಹೆಫಾಜತೆ ಇಸ್ಲಾಮಿ ಸಂಘಟನೆಗಳು ಈ ಕುಕೃತ್ಯ ಎಸಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ, ‘ಟ್ಯಾಗೋರ್ ಅವರು ಬಂಗಾಳ, ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಸಂಕೇತ. ನೈತಿಕತೆ, ನಾಗರಿಕತೆ, ಸೃಜನಶೀಲತೆ ಮತ್ತು ಸಂಸ್ಕೃತಿಯನ್ನು ಗೌರವಿಸುವ ಎಲ್ಲಾ ದೇಶಗಳು ಬಾಂಗ್ಲಾದೇಶದಲ್ಲಿ ನಡೆದದ್ದನ್ನು ಒಟ್ಟಾಗಿ ಖಂಡಿಸಬೇಕು’ ಎಂದು ಕರೆ ನೀಡಿದ್ದಾರೆ.

ಇದೇ ವೇಳೆ, ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಮೇಲೆಯೂ ವಾಗ್ದಾಳಿ ನಡೆಸಿದ್ದು, ‘ಅವರು ಬಾಂಗ್ಲಾ ನುಸುಳುಕೋರರನ್ನು ವೋಟ್‌ಬ್ಯಾಂಕ್‌ನಂತೆ ನೋಡುತ್ತಾರೆ’ ಎಂದು ಟೀಕಿಸಿದ್ದಾರೆ.

==

ಪಂಜಾಬ್‌ನ ಇನ್ಸ್ಟಾಗ್ರಾಂ ತಾರೆ ಕಂಚನ್‌ ಕುಮಾರಿ ಮೃತ ದೇಹ ಕಾರಲ್ಲಿ ಪತ್ತೆ

ಚಂಡೀಗಢ: ಪಂಜಾಬ್‌ ಮೂಲದ ಇನ್‌ಸ್ಟಾಗ್ರಾಂ ಇನ್‌ಫ್ಲ್ಯುಯೆನ್ಸರ್‌ ಕಂಚನ್‌ ಕುಮಾರಿ (ಕಮಲ್‌ ಕೌರ್‌ ಭಾಬಿ) ಅವರ ಮೃತದೇಹವು ಗುರುವಾರ ಪಂಜಾಬ್‌ನ ಬಠಿಂಡಾ ಸಮೀಪ ಕಾರಿನಲ್ಲಿ ಪತ್ತೆಯಾಗಿದೆ. ಕಂಚನ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಕಮಲ್‌ ಕೌರ್‌ ಭಾಬಿ ಎಂಬ ಹೆಸರಿಲ್ಲಿ ಖಾತೆ ಹೊಂದಿದ್ದು, 3.84 ಲಕ್ಷ ಜನ ಫಾಲೋವರ್ಸ್‌ ಅನ್ನು ಹೊಂದಿದ್ದರು. ಜೊತೆಗೆ ಯುಟ್ಯೂಬ್‌ನಲ್ಲಿಯೂ 2.36 ಲಕ್ಷ ಚಂದಾದಾರರನ್ನು ಹೊಂದಿದ್ದರು. ಜೂ.9ರಂದು ತಮ್ಮ ಮನೆಯಲ್ಲಿ ಕಾರ್ಯಕ್ರಮಕ್ಕೆ ಹೋಗುತ್ತಿರುವುದಾಗಿ ಹೇಳಿದ್ದ ಕಂಚನ್‌ ಜೂ.10ರಂದು ತಮ್ಮ ತಾಯಿಯ ಕರೆಗೆ ಉತ್ತರಿಸಿರಲಿಲ್ಲ. ಇದರ ಬೆನ್ನಲ್ಲೇ ಗುರುವಾರ ಬಠಿಂಡಾ ಸಮೀಪ ಕಾರಿನಲ್ಲಿ ಅನಾಥ ಶವವಾಗಿ ಪತ್ತೆಯಾಗಿದ್ದಾರೆ. ಕಂಚನ್‌ಗೆ ವಿದೇಶದ ಗ್ಯಾಂಗ್‌ಸ್ಟರ್‌ನಿಂದ ಬೆದರಿಕೆ ಇತ್ತು ಎಂದು ಅವರ ಸೋದರಿ ತಿಳಿಸಿದ್ದಾರೆ.

==

ಲಿಂಗ ಸಮಾನತೆ: ಕಳೆದ ಸಲಕ್ಕಿಂತ 2 ಸ್ಥಾನ ಕುಸಿದ ಭಾರತಕ್ಕೀಗ 131ನೇ ಸ್ಥಾನ

ನವದೆಹಲಿ: ಭಾರತದ ಲಿಂಗ ಸಮಾನತೆ ಕುಸಿತ ಕಂಡಿದ್ದು ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಲಿಂಗ ಸಮಾನತೆ-2025 ಬಿಡುಗಡೆ ಮಾಡಿರುವ 146 ದೇಶಗಳ ಪಟ್ಟಿಯಲ್ಲಿ ಭಾರತ 131ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಪಟ್ಟಿಯಲ್ಲಿ 129ನೇ ಸ್ಥಾನ ಪಡೆದಿದ್ದ ಭಾರತ ಈ ಬಾರಿ ಎರಡು ಸ್ಥಾನ ಕುಸಿತ ಕಂಡಿದೆ. ಐರ್ಲೆಂಡ್ ಸತತ 16ನೇ ಬಾರಿ ಅಗ್ರ ಸ್ಥಾನ ಪಡೆದಿದೆ. ಫಿನ್ಲೆಂಡ್‌, ನಾರ್ವೆ, ಇಂಗ್ಲೆಂಡ್‌, ನ್ಯೂಜಿಲೆಂಡ್ ನಂತರದ ಸ್ಥಾನದಲ್ಲಿವೆ. ಭಾರತ ಬಾಂಗ್ಲಾದೇಶ 75ನೇ ಸ್ಥಾನದಿಂದ 24ಕ್ಕೆ ಜಿಗಿದಿದೆ. ನೇಪಾಳ 125, ಶ್ರೀಲಂಕಾ 130, ಭೂತಾನ್ 119, ಮಾಲ್ಡೀವ್ಸ್ 138 ಮತ್ತು ಪಾಕಿಸ್ತಾನ 148ನೇ ಸ್ಥಾನದಲ್ಲಿವೆ.