ಸಾರಾಂಶ
ಪ.ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಲೈಂಗಿಕ ಕಿರುಕುಳ ಆರೋಪವು ಬೋಸ್ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.
ಕೋಲ್ಕತಾ : ರಾಜಭವನದಲ್ಲಿ ಪ.ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ತನಗೆ ಲೈಂಗಿಕ ಕಿರುಕುಳ ನೀಡಿದರು ಹಾಗೂ ಕಾಮಚೇಷ್ಟೆ ಮಾಡುತ್ತಿದ್ದರು ಎಂದು ಭವನದ ಮಹಿಳಾ ನೌಕರಳೊಬ್ಬಳು ಮಾಡಿದ ಆರೋಪವು ಬೋಸ್ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.
ರಾಜ್ಯಪಾಲ ಬೋಸ್ ಶುಕ್ರವಾರ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ‘ಚುನಾವಣೆ ವೇಳೆ ರಾಜಕೀಯ ಲಾಭಕ್ಕೋಸ್ಕರ ಇಂಥ ಸುಳ್ಳು ಆರೋಪಗಳನ್ನು ಮಾಡಿಸಲಾಗುತ್ತಿದೆ. ರಾಜಭವನದಲ್ಲಿ ಇನ್ನಷ್ಟು ಸಿಬ್ಬಂದಿಗಳಿಂದ ಇಂಥ ಆರೋಪಗಳನ್ನು ಮಾಡಿಸುವ ಸಂಚು ನಡೆದಿದೆ ಎಂದು ನನಗೆ ಗೊತ್ತಾಗಿದೆ. ಇಂಥದ್ದಕ್ಕೆಲ್ಲ ನಾನು ಬಗ್ಗಲ್ಲ. ಮಮತಾ ಸರ್ಕಾರದ ಭ್ರಷ್ಟಾಚಾರ ಹಾಗೂ ಹಿಂಸಾ ಕೃತ್ಯಗಳ ವಿರುದ್ಧ ನನ್ನ ಸಮರ ಮುಂದುವರಿಯಲಿದೆ’ ಎಂದಿದ್ದಾರೆ.
ಮಮತಾ ತಿರುಗೇಟು:
ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮಾತನಾಡಿ, ‘ಬೋಸ್ ಮೇಲೆ ರಾಜಭವನ ನೌಕರಳು ಮಾಡಿದ ಆರೋಪಗಳನ್ನು ನೋಡಿ ನನ್ನ ಹೃದಯ ಕಿತ್ತು ಬಂತು. ಬಿಜೆಪಿಯವರು ಸಂದೇಶ ಖಾಲಿ ಮಹಿಳಾ ದೌರ್ಜನ್ಯದ ಬಗ್ಗೆ ಆರೋಪ ಮಾಡುವುದನ್ನು ನಿಲ್ಲಿಸಿ, ಬೋಸ್ ಕೃತ್ಯಗಳ ಬಗ್ಗೆ ಮಾತನಾಡಲಿ. ಇನ್ನು ಶುಕ್ರವಾರ ಬಂಗಾಳದಲ್ಲೇ ಇದ್ದ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಏಕೆ ಚಕಾರ ಎತ್ತಿಲ್ಲ?’ ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲ ವಿರುದ್ಧ ತನಿಖೆಗೆ ಎಸ್ಐಟಿ
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ವಿರುದ್ಧ ರಾಜಭವನದ ಸಿಬ್ಬಂದಿ ಸಲ್ಲಿಸಿದ್ದ ಕಿರುಕುಳದ ದೂರಿಗೆ ಸಂಬಂಧಿಸಿದಂತೆ ಕೋಲ್ಕತಾ ಡಿಸಿಪಿ ಸೆಂಟ್ರಲ್ ನೇತೃತ್ವದಲ್ಲಿ 8 ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಪೊಲೀಸರು ರಚಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಶುಕ್ರವಾರ ರಾಜಭವನಕ್ಕೆ ಭೇಟಿ ನೀಡಿದ್ದು, ದೂರುದಾರ ಮಹಿಳೆಯೊಂದಿಗೆ ಮಾತುಕತೆ ನಡೆಸಿದೆ.