ಸಾರಾಂಶ
ಭಾರತ ಸರ್ಕಾರ ಅಧೀನದ ಟೆಲಿಕಾಂ ಉದ್ಯಮ ಭಾರತೀಯ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) 17 ವರ್ಷಗಳ ಬಳಿಕ ಮೊದಲ ಬಾರಿಗೆ ಲಾಭ ಮಾಡಿದೆ. 2024-25 ಹಣಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ ಸಂಸ್ಥೆಯು 262 ಕೋಟಿ ರು. ಲಾಭ ಮಾಡಿದೆ.
ನವದೆಹಲಿ: ಭಾರತ ಸರ್ಕಾರ ಅಧೀನದ ಟೆಲಿಕಾಂ ಉದ್ಯಮ ಭಾರತೀಯ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) 17 ವರ್ಷಗಳ ಬಳಿಕ ಮೊದಲ ಬಾರಿಗೆ ಲಾಭ ಮಾಡಿದೆ. 2024-25 ಹಣಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ ಸಂಸ್ಥೆಯು 262 ಕೋಟಿ ರು. ಲಾಭ ಮಾಡಿದೆ.
ಕಳೆದ ಬಾರಿ 2007ರಲ್ಲಿ ಲಾಭಗಳಿಸಿತ್ತು ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಹೇಳಿದ್ದಾರೆ. ಇದರ ಜೊತೆಗೆ ಕಳೆದ ವರ್ಷ ಜೂನ್ನಿಂದ ಡಿಸೆಂಬರ್ವರೆಗೆ ಕೇವಲ 6 ತಿಂಗಳಿನಲ್ಲಿ 60 ಲಕ್ಷ ಚಂದಾದಾರರು ಹೆಚ್ಚಳವಾಗಿದ್ದಾರೆ, ಇಂಟರ್ನೆಟ್ ಸಂಪರ್ಕ ಶೇ.14-18ರಷ್ಟು ಏರಿದೆ ಎಂದು ಸಿಂಧ್ಯಾ ಹೇಳಿದ್ದಾರೆ.
ಪ್ರಕರಣ ರದ್ದು ಕೋರಿ ರಣವೀರ್ ಸುಪ್ರೀಂಗೆ: ವಿಚಾರಣೆಗೂ ಗೈರು
ನವದೆಹಲಿ: ಕಾರ್ಯಕ್ರಮವೊಂದರಲ್ಲಿ ವಿವಾದಿತ ಹೇಳಿಕೆ ಸಂಬಂಧ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದು ಕೋರಿ ಪಾಡ್ಕಾಸ್ಟರ್ ರಣವೀರ್ ಅಲಹಾಬಾದಿಯಾ ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ. ಕೋರ್ಟ್ ಮುಂದಿನ ದಿನಗಳಲ್ಲಿ ಅರ್ಜಿ ವಿಚಾರಣೆ ನಡೆಸಲು ನಿರ್ಧರಿಸಿದೆ. ಈ ನಡುವೆ ಮುಂಬೈ ಪೊಲೀಸರು ಶುಕ್ರವಾರ ರಣವೀರ್ ಮನೆಗೆ ತೆರಳಿ ಹೇಳಿಕೆ ದಾಖಲಿಗೆ ಯತ್ನಿಸಿದಾದರೂ ಮನೆಗೆ ಬೀಗ ಹಾಕಿದ್ದ ಕಾರಣ ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿದ್ದಾರೆ. ಇನ್ನೊಂದೆಡೆ ಅಸ್ಸಾಂ ಪೊಲೀಸರು ಕೂಡಾ ರಣವೀರ್ ವಿಚಾರಣೆಗೆ ಕಾದು ಕುಳಿತಿದ್ದಾರೆ.
ಪೋಪ್ ಫ್ರಾನ್ಸಿಸ್ಗೆ ತೀವ್ರ ಅನಾರೋಗ್ಯ: ಆಸ್ಪತ್ರೆಗೆ
ರೋಮ್: ಕ್ರೈಸ್ತರ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಶಾಸಕೋಶದ ಚಿಕಿತ್ಸೆ ಮತ್ತು ಕೆಲವು ಅಗತ್ಯ ರೋಗನಿರ್ಣಯ ಪರೀಕ್ಷೆಗಳಿಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶುಕ್ರವಾರ ವ್ಯಾಟಿಕನ್ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಗುರುವಾರ ಫ್ರಾನ್ಸಿಸ್ ಅವರಿಗೆ ಆರೋಗ್ಯ ಸಮಸ್ಯೆ ಇರುವುದು 88 ವರ್ಷದ ಅವರು ಅನಾರೋಗ್ಯದ ನಡುವೆಯೂ ಪ್ರಾರ್ಥನೆ ಇತ್ಯಾದಿ ದೈನಂದಿನ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಭಾನುವಾರ ಉಸಿರಾಟದ ತೊಂದರೆ ತೀವ್ರವಾದ ಬಳಿಕ ಅವರನ್ನು ರೋಮ್ನ ಜೆಮೆಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರ್ಟಿಐ ವ್ಯಾಪ್ತಿಗೆ ಪಕ್ಷಗಳು?:
ಆಯೋಗ, ಪಕ್ಷಗಳು, ಕೇಂದ್ರಕ್ಕೆ ನೋಟಿಸ್
ನವದೆಹಲಿ: ರಾಜಕೀಯ ಪಕ್ಷಗಳಿಗೂ ಮಾಹಿತಿ ಹಕ್ಕು ಕಾಯ್ದೆ ಅನ್ವಯಿಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶುಕ್ರವಾರ ಚುನಾವಣಾ ಆಯೋಗ, ಕೇಂದ್ರ ಸರ್ಕಾರ ಮತ್ತು 6 ರಾಜಕೀಯ ಪಕ್ಷಗಳಿಗೆ ನೋಟಿಸ್ ನೀಡಿದೆ. ಎಡಿಆರ್ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರು 2015ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಪೀಠ, ನೋಟಿಸ್ ನೀಡಿ ವಿಚಾರಣೆಯನ್ನು ಏ.21ಕ್ಕೆ ಮುಂದೂಡಿದೆ. ಪಕ್ಷಗಳನ್ನು ಮಾಹಿತಿ ಹಕ್ಕು ವ್ಯಾಪ್ತಿಗೆ ರಾಜಕೀಯ ಪಕ್ಷಗಳನ್ನು ತಂದೆ ಕಪ್ಪುಹಣ ಮತ್ತು ಭ್ರಷ್ಟಾಚಾರವು ನಿಯಂತ್ರಣಕ್ಕೆ ಬರುತ್ತದೆ. ಇದರಿಂದಾಗಿ ಪಕ್ಷಗಳ ಹಣಕಾಸಿನ ವ್ಯವಹಾರವು ಪಾರದರ್ಶಕವಾಗಿರಲಿದೆ. ಆಗ ಪಕ್ಷಗಳನ್ನು ಅನರ್ಹ ಅಥವಾ ಶಿಕ್ಷೆಗೆ ಒಳಪಡಿಸಲು ಸಾಧ್ಯವಾಗುತ್ತದೆ ವಾದಿಸಿದೆ.
ಮಹಾ, ಬಂಗಾಳದ ಬಳಿಕ ಆಂಧ್ರದಲ್ಲೂ ಜಿಬಿಎಸ್: 10 ವರ್ಷದ ಬಾಲಕ ಬಲಿ
ವಿಶಾಖಪಟ್ಟಣ: ಮಹಾರಾಷ್ಟ್ರ, ಪಶ್ಚಿಮ ಬಂಗಾಳದ ಬಳಿಕ ಆಂಂಧ್ರ ಪ್ರದೇಶದಲ್ಲೂ ಈಗ ಗುಯಿಲಿನ್ ಬಾರ್ರೆ ಸಿಂಡ್ರೋಮ್ (ಜಿಬಿಎಸ್) ಕಾಣಿಸಿಕೊಂಡಿದೆ. ಶ್ರೀಕಾಕುಳಂ ಜಿಲ್ಲೆಯಲ್ಲಿ ವಟದ ಯುವತ ಎಂಬ 10 ವರ್ಷದ ಬಾಲಕ ಈ ಸೋಂಕಿಗೆ ಮೃತಪಟ್ಟಿದ್ದಾನೆ. ಸೋಂಕಿನಿಂದ ಸಂತಬೊಮ್ಮಳಿ ಮಂಡಲದ ಕಾಪು ಗೊಡಯವಲಸ ಗ್ರಾಮದ ಬಾಲಕನ ಬ್ರೈನ್ ಡೆಡ್ ಎಂದು ಘೋಷಿಸಲಾಯಿತು. ಬಾಲಕ ಗಂಟಲು ಉರಿ, ಜ್ವರದಿಂದ ಬಳಲುತ್ತಿದ್ದ. ಈ ನಡುವೆ ಜಿಬಿಎಸ್ ಸಾಂಕ್ರಾಮಿಕ ಎಂಬ ವದಂತಿ ಹಬ್ಬಿದ ಕಾರಣ ಸುತ್ತಮತ್ತಲ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸೋಂಕಿಗೆ ಭಾರತದಲ್ಲಿ ಇದುವರೆಗೆ 13 ಜನರು ಸಾವನ್ನಪ್ಪಿದ್ದಾರೆ.