ಸೇನಾಪಡೆಗಳಿಗೆ ಯೋಧರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ‘ಅಗ್ನಿವೀರ’ ಯೋಜನೆಯ ವಿಷಯದಲ್ಲಿ ಈ ಹಿಂದೆಯೂ ಹಲವು ಬಾರಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್‌ ಗಾಂಧಿ, ಇದೀಗ ಲೋಕಸಭೆಯ ಪ್ರತಿಪಕ್ಷ ನಾಯಕನಾದ ಬಳಿಕ ಮಾಡಿದ ಮೊದಲ ಭಾಷಣದಲ್ಲೂ ತೀಕ್ಷ್ಣವಾಗಿ ಕಿಡಿಕಾರಿದ್ದಾರೆ.

ನವದೆಹಲಿ: ಸೇನಾಪಡೆಗಳಿಗೆ ಯೋಧರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ‘ಅಗ್ನಿವೀರ’ ಯೋಜನೆಯ ವಿಷಯದಲ್ಲಿ ಈ ಹಿಂದೆಯೂ ಹಲವು ಬಾರಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್‌ ಗಾಂಧಿ, ಇದೀಗ ಲೋಕಸಭೆಯ ಪ್ರತಿಪಕ್ಷ ನಾಯಕನಾದ ಬಳಿಕ ಮಾಡಿದ ಮೊದಲ ಭಾಷಣದಲ್ಲೂ ತೀಕ್ಷ್ಣವಾಗಿ ಕಿಡಿಕಾರಿದ್ದಾರೆ.

‘ಅಗ್ನಿವೀರರು ಯೂಸ್‌ ಅಂಡ್‌ ಥ್ರೋ ಕಾರ್ಮಿಕರಿದ್ದಂತೆ. ಸೇನಾಪಡೆಯಲ್ಲಿ ಒಬ್ಬ ಜವಾನನಿಗೆ ಪಿಂಚಣಿ ಸಿಗುತ್ತದೆ, ಇನ್ನೊಬ್ಬ ಜವಾನನಿಗೆ ಸಿಗುವುದಿಲ್ಲ. ನೀವು ಜವಾನರನ್ನೂ ವಿಭಜನೆ ಮಾಡಿದ್ದೀರಿ’ ಎಂದು ಪ್ರಧಾನಿ ಮೋದಿ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದರು.

‘ಅಗ್ನಿವೀರ ಯೋಜನೆಯನ್ನು ಸರಿಯಾದ ಚರ್ಚೆಯಿಲ್ಲದೆ ಜಾರಿಗೊಳಿಸಲಾಗಿದೆ. ಕೇವಲ ಮೋದಿ ಕಚೇರಿಯ ಆದೇಶದಂತೆ ಅದನ್ನು ಜಾರಿಗೊಳಿಸಲಾಗಿದೆ’ ಎಂದೂ ಕಿಡಿಕಾರಿದರು.

ರಾಹುಲ್‌ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ‘ರಾಹುಲ್‌ ಗಾಂಧಿ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಅಗ್ನಿವೀರರು ಹುತಾತ್ಮರಾದರೆ ಕುಟುಂಬಕ್ಕೆ 1 ಕೋಟಿ ರು. ಪರಿಹಾರ ನೀಡಲಾಗುತ್ತದೆ’ ಎಂದು ಸಮರ್ಥಿಸಿಕೊಂಡರು.