ಸಾರಾಂಶ
ಆಗ್ರಾ: ಶುಕ್ರವಾರ ಆಗ್ರಾದಲ್ಲಿ ನಡೆದ ಪ್ಯಾರಾಚೂಟ್ ತರಬೇತಿ ವೇಳೆ ಕರ್ನಾಟಕ ಮೂಲದ ವಾಯುಪಡೆಯ ವಾರಂಟ್ ಅಧಿಕಾರಿ ಮಂಜುನಾಥ್ ಪ್ರಾಣ ಕಳೆದುಕೊಂಡ ಆಘಾತಕಾರಿ ಘಟನೆ ನಡೆದಿದೆ.
ವಾರಂಟ್ ಅಧಿಕಾರಿ ಮಂಜುನಾಥ್, ವಿಂಗ್ ಕಮಾಂಡರ್ ರೋಹಿತ್ ದಹಿಯಾ ಸೇರಿದಂತೆ 12 ತರಬೇತಿದಾರರು ಬೆಳಿಗ್ಗೆ 8:30ಕ್ಕೆ ವಾಯುಪಡೆಯ ವಿಮಾನದಿಂದ ತರಬೇತಿಯ ಭಾಗವಾಗಿ ಕೆಳಗೆ ಹಾರಿದ್ದರು. ಈ ಪೈಕಿ 11 ಮಂದಿ ಸುರಕ್ಷಿತವಾಗಿ ಇಳಿದಿದ್ದರು. ಆದರೆ ಮಂಜುನಾಥ್ ಮಾತ್ರ ಕೆಳಗಿಳಿದಿರಲಿಲ್ಲ.
ಈ ಹಿನ್ನೆಲೆಯಲ್ಲಿ ಸಮೀಪದ ಪ್ರದೇಶಗಳಲ್ಲಿ ತಪಾಸಣೆ ನಡೆಸಿದಾಗ ಗೋಧಿ ಹೊಲದಲ್ಲಿ ಮಂಜುನಾಥ್ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ವೇಳೆ ಪ್ಯಾರಾಚೂಟ್ ಬಿಚ್ಚಿಕೊಳ್ಳದೇ ಅವರು 1500 ಅಡಿ ಎತ್ತರದಿಂದ ಕೆಳಗೆ ಬಿದ್ದಿರುವುದು ಕಂಡುಬಂದಿದೆ.
ಸಾಮಾನ್ಯವಾಗಿ ವಿಮಾನದಿಂದ ಹಾರಿದ 5 ಸೆಕೆಂಡ್ನಲ್ಲಿ ಪ್ಯಾರಾಚೂಟ್ ತಂತಾನೆ ಬಿಚ್ಚಿಕೊಳ್ಳಬೇಕು. ಅದು ಆಗದೇ ಹೋದಲ್ಲಿ, ತುರ್ತು ಸಂದರ್ಭಕ್ಕೆಂದು ಮೀಸಲಿಟ್ಟ ಇನ್ನೊಂದು ಪ್ಯಾರಾಚೂಟ್ ಅನ್ನು ಸ್ವತಃ ತೆರೆಯಬೇಕಾಗುತ್ತದೆ. ಆದರೆ ಅದು ಕೂಡಾ ತೆರೆಯದೇ ಇದ್ದ ಪರಿಸ್ಥಿತಿಯಲ್ಲಿ ಘಟನಾ ಸ್ಥಳದಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ.
ಮಂಜುನಾಥ್ ಕರ್ನಾಟಕದವರಾಗಿದ್ದು, ಆಗ್ರಾ ಏರ್ಫೋರ್ಸ್ ಬೇಸ್ನಲ್ಲಿ ಕರ್ತವ್ಯದಲ್ಲಿದ್ದರು. ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗಿದೆ ಎಂದು ಮಲ್ಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಮೋದ್ ಶರ್ಮಾ ತಿಳಿಸಿದ್ದಾರೆ.