ಸಾರಾಂಶ
ಸೆರಾಂಪುರ (ಪ.ಬಂಗಾಳ): ಪಾಕ್ ಆಕ್ರಮಿತ ಕಾಶ್ಮೀರ ಭಾರತದ್ದೇ ಭೂಭಾಗವಾಗಿದ್ದು, ಅದನ್ನು ಭಾರತ ಸರ್ಕಾರ ಮರಳಿ ವಶಕ್ಕೆ ಪಡೆಯಲಿದೆ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಇಲ್ಲಿ ಬುಧವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ಶಾ, ಪಾಕಿಸ್ತಾನದ ಬಳಿ ಅಣುಬಾಂಬ್ ಇರುವುದನ್ನು ಭಾರತ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕೆಲವು ಪ್ರತಿಪಕ್ಷ ನಾಯಕರು ಎಚ್ಚರಿಸುತ್ತಿದ್ದಾರೆ. ಆದರೆ ಪಿಒಕೆ ಭಾರತದ್ದೇ ಭೂಭಾಗ ಆಗಿದ್ದು, ಅಣುಬಾಂಬ್ ಇದ್ದರೂ ಅದನ್ನು ಮೆಟ್ಟಿನಿಂತು ಅಲ್ಲಿನ ಪ್ರದೇಶವನ್ನು ಭಾರತದ ಭೂಪಟಕ್ಕೆ ಸೇರಿಸುತ್ತೇವೆ’ ಎಂದು ಹೇಳಿದ್ದಾರೆ.
ಜಿಹಾದ್ ವರ್ಸಸ್ ವಿಕಾಸ್: ಇದೇ ವೇಳೆ ಕಾಶ್ಮೀರ ಅಭಿವೃದ್ಧಿ ಕುರಿತು ಮಾತನಾಡುತ್ತಾ, ‘2019ರಲ್ಲಿ 370ನೇ ವಿಧಿ ರದ್ದತಿಗೆ ಮೊದಲು ಕಾಶ್ಮೀರದಲ್ಲಿ ಕಲ್ಲೆಸೆತ ಇತ್ತು. ಈಗ ಅಲ್ಲಿ ಶಾಂತಿ ನೆಲೆಸಿ ಪಿಒಕೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಕಲ್ಲೆಸೆತ ನಡೆಯುತ್ತಿದೆ. ಪ್ರಸ್ತುತ ಚುನಾವಣೆ ಜಿಹಾದ್ ವರ್ಸಸ್ ವಿಕಾಸ್ (ಕೋಮುವಾದ ವರ್ಸಸ್ ಅಭಿವೃದ್ಧಿ) ಚುನಾವಣೆಯಾಗಿದ್ದು, ವಿಕಾಸಕ್ಕೆ ಬೆಂಬಲಿಸಿ’ ಎಂದು ಜನತೆಗೆ ಕರೆ ನೀಡಿದರು.