ಸಿಎಎ ಕಾನೂನಿನಲ್ಲಿ ಯಾರ ಪೌರತ್ವವನ್ನೂ ಕಸಿಯುವುದಿಲ್ಲ. ಬದಲಾಗಿ ಅದರಿಂದ ಪಾಕ್‌, ಬಾಂಗ್ಲಾ ನಿರಾಶ್ರಿತರಿಗೆ ಮೋದಿ ಗೌರವ ಸೂಚಿಸಿದ್ದಾರೆ ಎಂದು ಗೃಹ ಸಚಿವ ಅಮಿತ್‌ ಶಾ ಮನವಿ ಮಾಡಿದ್ದಾರೆ.

ಹೈದರಾಬಾದ್‌: ಕಾಂಗ್ರೆಸ್‌ ಪಕ್ಷವು ಸ್ವಾತಂತ್ರ್ಯಾ ನಂತರ ನಿರಾಶ್ರಿತರಿಗೆ ಭಾರತೀಯ ಪೌರತ್ವ ಕೊಡುವುದಾಗಿ ಹೇಳಿಕೊಂಡು ಬರುತ್ತಿತ್ತೇ ಹೊರತು ತುಷ್ಟೀಕರಣ ಮತ್ತು ತನ್ನ ಮತಬ್ಯಾಂಕ್‌ ರಾಜಕಾರಣಕ್ಕಾಗಿ ಅದನ್ನು ಜಾರಿ ಮಾಡಲಿಲ್ಲ. ಈಗ ಬಿಜೆಪಿ, ಅದನ್ನು ಸಾಕಾರಗೊಳಿಸಿ ನಿರಾಶ್ರಿತರನ್ನು ಗೌರವಿಸುವ ಕೆಲಸ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಅಲ್ಲದೆ, ‘ಆದರೆ ಸಿಎಎ ಯಾರ ಪೌರತ್ವವನ್ನೂ ಕಸಿಯಲ್ಲ. ಪೌರತ್ವ ಕಸಿಯುತ್ತೆ ಎಂದು ಕಾಂಗ್ರೆಸ್‌ ಹಾಗೂ ವಿಪಕ್ಷಗಳು ಸುಳ್ಳು ಹೇಳುತ್ತಿವೆ. ಇದು ಪೌರತ್ವ ನೀಡುವ ಕಾಯ್ದೆ ಮಾತ್ರ’ ಎಂದು ಕಿಡಿಕಾರಿದರು.

ಮಂಗಳವಾರ ಬಿಜೆಪಿ ಸಭೆಯಲ್ಲಿ ಮಾತನಾಡಿದ ಶಾ, ‘ನಾವು ಸಿಎಎ ಜಾರಿ ಮಾಡುತ್ತೇವೆ ಎಂದು ಹೇಳುತ್ತಿದ್ದೆವು ಮತ್ತು ಮಾಡಿ ತೋರಿಸಿದ್ದೇವೆ. ಹಿಂದೂ, ಜೈನ, ಬೌದ್ಧ, ಸಿಖ್‌ ನಿರಾಶ್ರಿತರಿಗೆ ತಮ್ಮ ದೇಶದಲ್ಲೇ ಇದ್ದರೂ ಪೌರತ್ವ ಸಿಗದೆ ಅವಮಾನ ಆಗುತ್ತಿತ್ತು. ಈಗ ಪ್ರಧಾನಿ ಮೋದಿ ಅವರನ್ನು ಗೌರವಿಸುವ ಕೆಲಸ ಮಾಡಿದ್ದಾರೆ. ಆದರೆ ತಮ್ಮ ಮುಸ್ಲಿಂ ತುಷ್ಟೀಕರಣದ ಮತಬ್ಯಾಂಕ್‌ ಭದ್ರಪಡಿಸಿಕೊಳ್ಳಲು ಕಾಂಗ್ರೆಸ್‌ ಈಗಲೂ ಕಾಯ್ದೆಗೆ ವಿರೋಧಿಸುತ್ತಿದೆ. ಕಾಂಗ್ರೆಸ್‌ ಪಕ್ಷು ಸಿಎಎ ಜಾರಿಯಿಂದ ಭಾರತದಲ್ಲಿರುವ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳಲಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.