ಸಾರಾಂಶ
ಅಮರಾವತಿ: ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯ ಪ್ರಕಾಶಂ ಬ್ಯಾರೇಜ್ನಿಂದ ಶ್ರೀಶೈಲಂ ಜಲಾಶಯದವರೆಗೆ ಸಂಪರ್ಕಿಸುವ ಸೀಪ್ಲೇನ್ಗಳಿಗೆ ಪ್ರಾಯೋಗಿಕ ಚಾಲನೆ ದೊರೆತಿದೆ. ಇದು ಶ್ರೀಶೈಲದ ಮಲ್ಲಿಕಾರ್ಜುನ ದೇಗುಲಕ್ಕೆ ತೆರಳುವ ಭಕ್ತರಿಗೆ ಅನುಕೂಲ ಮಾಡಿಕೊಡಲಿದೆ.
ವಿಜಯವಾಡದಿಂದ ಬರುವ ಭಕ್ತರು ಶ್ರೀಶೈಲಂ ಜಲಾಶಯದಲ್ಲಿ ಇಳಿದು ಅಲ್ಲಿಂದ ರೋಪ್ವೇ ಹಾಗೂ ರಸ್ತೆ ಮಾರ್ಗದ ಮೂಲಕ ಮಲ್ಲಿಕಾರ್ಜುಣ ದೇಗುಲಕ್ಕೆ ತೆರಳುವ ವ್ಯವಸ್ಥೆ ಇದಾಗಿದೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮತ್ತು ನಾಗರಿಕ ವಿಮಾನಯಾನ ಸಚಿವ ಕೆ.ರಾಮ್ಮೋಹನ್ ನಾಯ್ಡು ಅವರು ಸೀಪ್ಲೇನ್ ಏರಿ ಚಾಲನೆ ನೀಡಿದರು.
ಒಂದು ತಾಸು ಸೀಪ್ಲೇನ್ ಪ್ರಯಾಣದ ಬಳಿಕ ಶ್ರೀಶೈಲಂಗೆ ಸಿಎಂ ನಾಯ್ಡು ಮತ್ತು ಕೇಂದ್ರ ಸಚಿವ ರಾಮ್ಮೋಹನ್ ನಾಯ್ಡು ಬಂದಿಳಿದರು. ಬಳಿಕ ರೋಪ್ವೇ ಮೂಲಕ ಶ್ರೀಶೈಲಂನ ಬೆಟ್ಟಕ್ಕೆ ತೆರಳಿ ಅಲ್ಲಿಂದ ಬಸ್ ಮೂಲಕ ದೇಗುಲಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಸಿಎಂ ನಾಯ್ಡು, ಸೀಪ್ಲೇನ್ಗಳಿಗೆ ಸಾಮಾನ್ಯ ವಿಮಾನದ ರೀತಿ ದೊಡ್ಡ ವ್ಯವಸ್ಥೆ ಬೇಕಾಗುವುದಿಲ್ಲ. ಇವು ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ ಉದ್ಯೋಗಾವಕಾಶವನ್ನು ಒದಗಿಸುತ್ತವೆ ಎಂದು ಹೇಳಿದರು.