ಸಾರಾಂಶ
ಕೇಜ್ರಿಗೆ ಮದ್ಯ ನೀತಿ ಜಾರಿ ಮಾಡಬೇಡಿ ಎಂದಿದ್ದೆ. ಆದರೂ ಸರ್ಕಾರಕ್ಕೆ ಅದರಿಂದ ಆದಾಯ ರುವ ಹಿನ್ನೆಲೆಯಲ್ಲಿ ಜಾರಿ ಮಾಡುವುದಾಗಿ ಕೇಜ್ರಿವಾಲ್ ತಿಳಿಸಿದ್ದರು ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಮುಂಬೈ: ಲೋಕಪಾಲ ಮಸೂದೆಗೆ ಜಾರಿ ಕೋರಿ ಅನಿರ್ದಿಷ್ಟ ಉಪವಾಸ ಮಾಡುವ ಮೂಲಕ ಅರವಿಂದ್ ಕೇಜ್ರಿವಾಲ್ ಅವರು ಮುನ್ನೆಲೆಗೆ ಬರಲು ಕಾರಣರಾಗಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು, ತಾವು ಕೇಜ್ರಿವಾಲ್ಗೆ ಮದ್ಯ ನೀತಿಯನ್ನು ಜಾರಿಗೆ ತರದಂತೆ ಹಲವು ಬಾರಿ ವಿನಂತಿಸಿದ್ದಾಗಿ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಕೇಜ್ರಿವಾಲ್ ಅವರ ಬಂಧನಕ್ಕೆ ಅವರು ಮಾಡಿದ ಕರ್ಮಗಳೇ ಕಾರಣವಾಗಿದೆ. ನಾನು ಅವರಿಗೆ ಹಲವು ಬಾರಿ ಮದ್ಯ ಕುರಿತಾದ ನೀತಿಯನ್ನು ಜಾರಿ ಮಾಡಬೇಡಿ ಎಂದು ಪರಿಪರಿಯಾಗಿ ವಿನಂತಿಸಿದ್ದೆ.
ಆದರೆ ಅವರು ಹೆಚ್ಚು ಆದಾಯ ಬರಲಿದೆ ಎನ್ನುವ ಸಲುವಾಗಿ ನೀತಿಯನ್ನು ಜಾರಿ ಮಾಡಿದರು. ಒಂದು ಕಾಲದಲ್ಲಿ ಮದ್ಯಪಾನದ ಕುರಿತಾಗಿ ಹೋರಾಡಿದವರೇ ಇಂದು ಮದ್ಯ ನೀತಿಯ ಹಗರಣದಲ್ಲಿ ಬಂಧನವಾಗಿರುವುದನ್ನು ಕೇಳಿ ಬಹಳ ದುಃಖವಾಗಿದೆ’ ಎಂದು ತಿಳಿಸಿದರು.