ಸಾರಾಂಶ
ಸದಾ ವಿವಾದಿತ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಇದೀಗ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ
ಮುಂಬೈ: ಸದಾ ವಿವಾದಿತ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಇದೀಗ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ. ‘ಬ್ರಾಹ್ಮಣರ ಮೇಲೆ ಮೂತ್ರ ಮಾಡುವೆ? ಏನೀಗ?’ ಎಂದು ಅವರು ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಅದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿವಾದದ ಬೆನ್ನಲ್ಲೇ ಅವರು ಕ್ಷಮೆಯಾಚಿಸಿದ್ದಾರೆ.
ಕಶ್ಯಪ್ ಹೇಳಿಕೆಯನ್ನು ಹಲವು ಹಿಂದೂ ಸಂಘಟನೆಗಳು, ಬ್ರಾಹ್ಮಣ ಸಮುದಾಯ ಮತ್ತು ಕೇಂದ್ರ ಸಚಿವರು ಖಂಡಿಸಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ. ಜೊತೆಗೆ ದೆಹಲಿಯಲ್ಲಿ ಹೇಳಿಕೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಷ್ಟೆಲ್ಲಾ ಆದ ಮೇಲೆ ಕಶ್ಯಪ್ ಕ್ಷಮೆ ಯಾಚಿಸಿರುದ್ದಾರೆ. ಆದರೆ ‘ಅದು ನನ್ನ ಹೇಳಿಕೆ ಬಗ್ಗೆ ಅಲ್ಲ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಕ್ಕೆ’ ಎಂದು ಮತ್ತೆ ಮೊಂಡಾಟ ಮೆರೆದಿದ್ದಾರೆ.
ಏನಿದು ವಿವಾದ?:
ಸಮಾಜ ಸುಧಾರಕಿ ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ವಿರುದ್ಧ ‘ಫುಲೆ’ ಹೆಸರಿನ ಚಿತ್ರವೊಂದು ನಿರ್ಮಾಣಗೊಂಡಿದ್ದು, ಅದು ಏ.10ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು ಸಮಾಜ ಆಕ್ರೋಶ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ಏ.25ಕ್ಕೆ ಮುಂದೂಡಿಕೆಯಾಗಿತ್ತು.
ಈ ಕುರಿತು ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸಿರುವ ಅನುರಾಗ್ ಕಶ್ಯಪ್ ‘ನಾನು ಬ್ರಾಹ್ಮಣರ ಮೇಲೆ ಮೂತ್ರ ಮಾಡುವೆ. ಏನಾದರೂ ತೊಂದರೆಯಿದೆಯೇ?’ ಎಂದು ಬರೆದಿದ್ದರು.
‘ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ನನ್ನ ಕುಟುಂಬಕ್ಕೆ ಹತ್ಯೆ ಮತ್ತು ಅತ್ಯಾಚಾರದ ಬೆದರಿಕೆ ಕರೆ ಬರುತ್ತಿದೆ. ಏನಾದರೂ ದೂಷಣೆ ಮಾಡುವುದಿದ್ದರೆ ನನ್ನನ್ನು ಮಾಡಿ, ನನ್ನ ಕುಟುಂಬವನ್ನಲ್ಲ’ ಎಂದು ಕಶ್ಯಪ್ ಮನವಿ ಮಾಡಿದ್ದಾರೆ.