ಎನ್‌ಡಿಎ 3.0 ಸರ್ಕಾರದ ಒಂದು ವರ್ಷ ಯಶಸ್ವಿ : ವಿಕಾಸದ ಹನ್ನೊಂದು ವರ್ಷ, ಜನತೆಗೆ ಭರಪೂರ ಹರ್ಷ

| N/A | Published : Jun 10 2025, 05:59 AM IST

CM Yogi Adityanath and PM Narendra Modi
ಎನ್‌ಡಿಎ 3.0 ಸರ್ಕಾರದ ಒಂದು ವರ್ಷ ಯಶಸ್ವಿ : ವಿಕಾಸದ ಹನ್ನೊಂದು ವರ್ಷ, ಜನತೆಗೆ ಭರಪೂರ ಹರ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಎನ್‌ಡಿಎ 3.0 ಸರ್ಕಾರ ಒಂದು ವರ್ಷದ ಯಶಸ್ವಿ ಹೆಜ್ಜೆಯನ್ನಿರಿಸಿದೆ. ಹಾಗೆಯೇ ಎನ್‌ಡಿಎ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ 11 ವರ್ಷದ ಮಾದರಿ ಆಡಳಿತ ಹುಟ್ಟುಹಾಕಿದ್ದಾರೆ. ಇದು ಕೇವಲ ವರ್ಷಗಳ ಲೆಕ್ಕದ ಸಂಭ್ರಮಾಚರಣೆ ಎಂದುಕೊಳ್ಳಬಾರದು. ಇದು ಅಭಿವೃದ್ಧಿಯ ಹೆಜ್ಜೆಗಳ ಸಂಭ್ರಮದ ನೋಟ.

ಆರ್.ಅಶೋಕ, ವಿರೋಧ ಪಕ್ಷದ ನಾಯಕ.

ಅದೊಂದು ಕುಗ್ರಾಮ. ಅಲ್ಲಿ ವಿವಾಹಿತ ಮಹಿಳೆಯರೊಬ್ಬರು ಕಾಡಿನಿಂದ ಸೌದೆಯನ್ನು ತಂದು ಉರಿಸಿ ಪ್ರತಿ ದಿನ ಗಂಡ, ಮಕ್ಕಳಿಗೆ ಅಡುಗೆ ಮಾಡುತ್ತಿದ್ದರು. ಹತ್ತಿರದೆಲ್ಲೆಲ್ಲೂ ಕುಡಿಯುವ ನೀರಿನ ಸೌಲಭ್ಯವಿಲ್ಲದಿದ್ದರಿಂದ ದೂರದ ಕೆರೆಯವರೆಗೆ ನಡೆದು ಬಿಂದಿಗೆಯಲ್ಲಿ ನೀರು ತರುತ್ತಿದ್ದರು. ಬಡತನದಿಂದಾಗಿ ಶೌಚಾಲಯವಿಲ್ಲದೆ, ನಾಚಿಕೆ ಮುಜುಗರದಿಂದ ರಾತ್ರಿ ಅಥವಾ ಮುಂಜಾನೆ ಬೇಗ ಶೌಚಕ್ಕೆ ಗುಡ್ಡಕ್ಕೆ ಹೋಗುತ್ತಿದ್ದರು. ಈಗ ಅವರ ಬದುಕು ಬದಲಾಗಿದೆ. ಆಕೆ ಈಗ ಕಾಡಿಗೆ ಹೋಗಿ ಸೌದೆಯನ್ನು ತರಬೇಕಿಲ್ಲ. ಏಕೆಂದರೆ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಉಚಿತ ಅಡುಗೆ ಅನಿಲದ ಸಿಲಿಂಡರ್ ಸುಲಭವಾಗಿ ಸಿಗುತ್ತದೆ. ಆಕೆ ಈಗ ಕೆರೆಯವರೆಗೆ ನಡೆದು ನೀರು ತರಬೇಕಿಲ್ಲ. ಏಕೆಂದರೆ ಜಲಜೀವನ್ ಮಿಷನ್ನಡಿ ಮನೆಗೆ ಕೊಳಾಯಿ ನೀರಿನ ಸಂಪರ್ಕ ಸಿಕ್ಕಿದೆ. ಆಕೆ ಈಗ ಗುಡ್ಡಕ್ಕೆ ಹೋಗಬೇಕಿಲ್ಲ. ಏಕೆಂದರೆ ಸ್ವಚ್ಛ ಭಾರತ ಯೋಜನೆಯಡಿ ಮನೆಯ ಬಳಿಯೇ ಸುಸಜ್ಜಿತವಾದ ಶೌಚಾಲಯ ನಿರ್ಮಾಣವಾಗಿದೆ.

ಇದು ಕೇವಲ ಒಬ್ಬ ಭಾರತೀಯ ಮಹಿಳೆಯ ಬದುಕಿನಲ್ಲಿ ಬಂದಿರುವ ಸುಧಾರಣೆಯಲ್ಲ. ಕೋಟ್ಯಂತರ ಮಹಿಳೆಯರು ಈ ವಿಕಾಸ ಪರ್ವದ ರುಚಿಯನ್ನು ಸವಿಯುತ್ತಿದ್ದಾರೆ. ಇದೇ ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಾಯಕತ್ವದ ವಿಕಸಿತ ಭಾರತದ ನಡಿಗೆ. ಇದೇ ಎನ್‌ಡಿಎ ಸರ್ಕಾರದ 11 ವರ್ಷದ ಬಡವರ ಕಾಳಜಿಯ ಕೊಡುಗೆ. ಇದೇ ಸುಭದ್ರತೆ, ಸುರಕ್ಷತೆ, ಸುಲಲಿತ ಜೀವನದ ಗ್ಯಾರಂಟಿ.

ಎನ್‌ಡಿಎ 3.0 ಸರ್ಕಾರ ಒಂದು ವರ್ಷದ ಯಶಸ್ವಿ ಹೆಜ್ಜೆಯನ್ನಿರಿಸಿದೆ. ಹಾಗೆಯೇ ಎನ್‌ಡಿಎ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ 11 ವರ್ಷದ ಮಾದರಿ ಆಡಳಿತ ಹುಟ್ಟುಹಾಕಿದ್ದಾರೆ. ಇದು ಕೇವಲ ವರ್ಷಗಳ ಲೆಕ್ಕದ ಸಂಭ್ರಮಾಚರಣೆ ಎಂದುಕೊಳ್ಳಬಾರದು. ಇದು ಅಭಿವೃದ್ಧಿಯ ಹೆಜ್ಜೆಗಳ ಸಂಭ್ರಮದ ನೋಟ. ಕಳೆದ ಹನ್ನೊಂದು ವರ್ಷಗಳಲ್ಲಿ ಭಾರತ ಜಗತ್ತಿನ ಅತಿ ಬಲಿಷ್ಠ ಆರ್ಥಿಕತೆಗಳಲ್ಲಿ ಒಂದಾಗಿದೆ. ಭಾರತ ಎಂದರೆ ಪ್ರತ್ಯೇಕವಾದ ಶಕ್ತಿ ಎಂಬುದನ್ನು ಸಾಬೀತುಪಡಿಸಿದೆ. ಅದಕ್ಕೆ ಕಾರಣವಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರ ದೃಢ ತೀರ್ಮಾನಗಳೇ ಹೊರತು ಬೇರೇನೂ ಅಲ್ಲ.

ನಿಜವಾದ ಗ್ಯಾರಂಟಿ ಯಾವುದು?:

ರಾಜ್ಯದಲ್ಲಿ ಕಳೆದೆರಡು ವರ್ಷಗಳಲ್ಲಿ ಜನರಿಗೆ ನಿಜವಾದ ಗ್ಯಾರಂಟಿ ಎಂದರೆ ಏನು ಎಂಬುದು ಅರ್ಥವಾಗಿದೆ. ಹಣಕಾಸಿನ ಅರ್ಥ ತಿಳಿಯದೆ ಬೇಕಾಬಿಟ್ಟಿಯಾಗಿ ಹಣವನ್ನು ದುರ್ಬಳಕೆ ಮಾಡಿ, ಜನರಿಂದಲೇ ಹಣ ವಸೂಲಿ ಮಾಡುವುದಕ್ಕೆ ಗ್ಯಾರಂಟಿಗಳು ಬೇಕಿತ್ತೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಒಂದೆಡೆ ರಾಜ್ಯದ ಆರ್ಥಿಕತೆ ಅನಾಹುತಕಾರಿ ಮಟ್ಟಕ್ಕೆ ಹೋಗುತ್ತಿದ್ದರೆ, ಮತ್ತೊಂದೆಡೆ ದೇಶದ ಆರ್ಥಿಕತೆ ವೇಗದ ಪ್ರಗತಿ ಸಾಧಿಸುತ್ತಿದೆ. ಕಳೆದ 60 ವರ್ಷಗಳಿಂದ ನಮ್ಮಲ್ಲಿ ಬಡತನ ನಿರ್ಮೂಲನೆ ಎಂದು ಘೋಷಣೆ ಮಾಡಿಕೊಂಡೇ ಬಂದಿದ್ದಾರೆ. ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರ ಅದನ್ನು ನಿಜ ಮಾಡಿದೆ. 2011-12 ರಲ್ಲಿ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.27.1 ರಷ್ಟಿದ್ದ ಕಡು ಬಡವರ ಪ್ರಮಾಣ, ಕಳೆದೊಂದು ದಶಕದಲ್ಲಿ ಶೇ.5.3ಕ್ಕೆ ಇಳಿದಿದೆ. ಇದನ್ನು ಬಿಜೆಪಿ ಹೇಳಿದ್ದರೆ, ಬೇರೆ ಪಕ್ಷಗಳು ಸುಳ್ಳು ಎಂದು ಅಪಪ್ರಚಾರ ಮಾಡುತ್ತಿದ್ದವು. ಆದರೆ ಇದನ್ನು ವಿಶ್ವಬ್ಯಾಂಕ್‌ನ ವರದಿ ಉಲ್ಲೇಖಿಸಿದೆ. ಈ ವರದಿಯ ಪ್ರಕಾರ, ಹತ್ತು ವರ್ಷಗಳ ಹಿಂದೆ 34 ಕೋಟಿಯಷ್ಟಿದ್ದ ಬಡವರ ಸಂಖ್ಯೆ 2023ರ ವೇಳೆಗೆ 7.5 ಕೋಟಿಗೆ ಇಳಿದಿದೆ. ಅಂದರೆ 26 ಕೋಟಿ ಜನರು ಬಡತನದಿಂದ ಮುಕ್ತರಾಗಿದ್ದಾರೆ.

ಇವೆಲ್ಲಕ್ಕೂ ಪ್ರಧಾನಿ ನರೇಂದ್ರ ಮೋದಿಯವರು ತಂದ ಬಡವರ ಪರವಾದ ಯೋಜನೆಗಳೇ ಕಾರಣ ಎನ್ನುವುದರಲ್ಲಿ ಅನುಮಾನವೇ ಬೇಡ. ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 81 ಕೋಟಿ ಜನರಿಗೆ ಉಚಿತ ಅಕ್ಕಿ, 15 ಕೋಟಿಗೂ ಅಧಿಕ ಮನೆಗಳಿಗೆ ಜಲಜೀವನ್ ಮಿಷನ್‌ನ ನೀರು, ಆವಾಸ್ ಯೋಜನೆಯಡಿ 4 ಕೋಟಿ ಮನೆಗಳ ನಿರ್ಮಾಣ, ಸ್ವಚ್ಛ ಭಾರತ ಯೋಜನೆಯಡಿ 12 ಕೋಟಿ ಶೌಚಾಲಯ ನಿರ್ಮಾಣ, ಮುದ್ರಾ ಯೋಜನೆಯಡಿ ₹51 ಕೋಟಿ ಸಾಲ, ಜನಧನ ಯೋಜನೆಯಡಿ 55 ಕೋಟಿ ಖಾತೆಗಳ ಸೃಷ್ಟಿ, ಆಯುಷ್ಮಾನ್ ಭಾರತ್ ಯೋಜನೆಯಡಿ 9.56 ಕೋಟಿ ಆಸ್ಪತ್ರೆ ದಾಖಲಾತಿ ಹೀಗೆ ಅನೇಕ ಯೋಜನೆಗಳು ಜನಪರವಾದ ಅಲೆಯನ್ನು ಸೃಷ್ಟಿಸಿವೆ.

ಹಿಂದುಳಿದ ವರ್ಗ ಹಾಗೂ ದಲಿತರ ಬಗ್ಗೆ ಭಾಷಣ ಬಿಗಿಯುವವರು ಆ ವರ್ಗದವರನ್ನು ಅದೇ ಸ್ಥಿತಿಯಲ್ಲಿ ನೋಡಲು ಬಯಸುತ್ತಾರೆ. ಆದರೆ ಪ್ರಧಾನಿ ಮೋದಿ ಎಲ್ಲ ಯೋಜನೆಗಳಲ್ಲೂ ಈ ವರ್ಗಗಳಿಗೆ ಆದ್ಯತೆ ನೀಡಿದ್ದಾರೆ. ಫಸಲ್ ಬಿಮಾ ಯೋಜನೆಯಡಿ 71%, ಪಿಎಂ ಕಿಸಾನ್ ಯೋಜನೆಯಡಿ 80%, ಆವಾಸ್ ಯೋಜನೆಯಡಿ 44%, ವಿದ್ಯಾರ್ಥಿವೇತನ ಯೋಜನೆಗಳಡಿ 58%, ಮುದ್ರಾ ಯೋಜನೆಯಡಿ 51% ರಷ್ಟು ಜನರು ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗದವರು ಇದ್ದಾರೆ.

ಸುರಕ್ಷತೆ:

ದೇಶದ ಸುರಕ್ಷತೆಯ ವಿಚಾರಕ್ಕೆ ಬಂದರೆ ಪ್ರಧಾನಿ ಮೋದಿ ಅವರದ್ದು ಗಂಭೀರ ನಿರ್ಧಾರಗಳು. ಇತ್ತೀಚೆಗೆ ನಡೆದ ಆಪರೇಷನ್ ಸಿಂದೂರದಲ್ಲಿ ಅದು ಎಲ್ಲರಿಗೂ ಮನದಟ್ಟಾಗಿದೆ. 2014ಕ್ಕೆ ಮುನ್ನ ಭಯೋತ್ಪಾದಕ ದಾಳಿಗಳು ನಡೆದಾಗ ಒಂದೇ ಒಂದು ಖಡಕ್ ಉತ್ತರ ನೀಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಆದರೀಗ ಕಾಲ ಬದಲಾಗಿದೆ. ಪಾಕಿಸ್ತಾನವೇ ಮಂಡಿಯೂರಿ ಭಾರತದ ಬಳಿ ದಯೆಯ ಭಿಕ್ಷೆ ಕೇಳಿದೆ. ಉಗ್ರರ ಅಡಗುತಾಣಗಳನ್ನು ನಾಶಪಡಿಸಿಯೇ ಭಾರತದ ಧೀರ ಯೋಧರು ಯುದ್ಧದಿಂದ ಮರಳಿದ್ದಾರೆ.

ಒಂದು ಜವಾಬ್ದಾರಿಯುತ ಸರ್ಕಾರವಾಗಿ ಜನರ ಪ್ರಾಣ ರಕ್ಷಣೆ ಮಾಡಬೇಕಿರುವುದು ಕರ್ತವ್ಯ ಎಂಬುದನ್ನು ಕೇಂದ್ರ ಸರ್ಕಾರ ತೋರಿಸಿಕೊಟ್ಟಿದೆ. ಆದರೆ ರಾಜ್ಯದಲ್ಲಿ ಇದಕ್ಕೆ ತದ್ವಿರುದ್ಧ ಸನ್ನಿವೇಶವಿದೆ. ಕೋಮುವಾದ, ಭಯೋತ್ಪಾದನೆ, ಅತ್ಯಾಚಾರ, ಅಪರಾಧ ಚಟುವಟಿಕೆಗಳ ಹೆಚ್ಚಳದಿಂದಾಗಿ ಜನರಿಗೆ ಸರಿಯಾದ ಸುರಕ್ಷತೆ ದೊರೆಯುತ್ತಿಲ್ಲ. ರಕ್ಷಣೆ ನೀಡಬೇಕಾದ ಪೊಲೀಸರನ್ನೇ ಬೆಂಗಳೂರಿನ ಕಾಲ್ತುಳಿತದ ಪ್ರಕರಣದಲ್ಲಿ ಅಪರಾಧಿಗಳನ್ನಾಗಿಸಲಾಗಿದೆ. ದೇಶವನ್ನು ರಕ್ಷಿಸುವ ಯೋಧರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಪ್ರಧಾನಿ ಮೋದಿ ಈ ಹನ್ನೊಂದು ವರ್ಷಗಳಲ್ಲಿ ರಕ್ಷಣಾ ವ್ಯವಸ್ಥೆಯ ದಿಕ್ಕನ್ನೇ ಬದಲಿಸಿದ್ದಾರೆ. ಆದರೆ ರಾಜ್ಯದೊಳಗೆ ರಕ್ಷಣಾ ವ್ಯವಸ್ಥೆಯ ಭಾಗವಾದ ಪೊಲೀಸರ ಆತ್ಮಸ್ಥೈರ್ಯವೇ ಕುಸಿದುಹೋಗಿದೆ.

ರಾಜಕೀಯ ತಿಕ್ಕಾಟ:

ಯಾವುದೇ ಪಕ್ಷವಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಂದಾಗಿ ಸಾಗುವುದು ಅಗತ್ಯ. ಪ್ರಧಾನಿ ಮೋದಿಯವರು ಅನೇಕ ಕ್ರಾಂತಿಕಾರಿ ಯೋಜನೆಗಳನ್ನು ಈ ಹನ್ನೊಂದು ವರ್ಷಗಳಲ್ಲಿ ತಂದಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಅಂತಹ ಯೋಜನೆಗಳಲ್ಲೊಂದು. ಇದನ್ನು ರಾಜ್ಯದಲ್ಲಿ ಇನ್ನೂ ಜಾರಿ ಮಾಡಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯಡಿ 70 ವರ್ಷ ಮೀರಿದವರಿಗೂ ಉಚಿತ ಚಿಕಿತ್ಸೆ ನೀಡುವ ಕ್ರಮ ಜಾರಿ ಬಗ್ಗೆ ಇನ್ನೂ ಖಚಿತತೆ ಇಲ್ಲ. ಜನ ಔಷಧಿ ಕೇಂದ್ರಗಳ ಮೂಲಕ ಕೇಂದ್ರ ಸರ್ಕಾರ ಶೇ.70ರಷ್ಟು ರಿಯಾಯಿತಿ ದರಕ್ಕೆ ಔಷಧಿಗಳನ್ನು ನೀಡಿದರೆ, ಅವುಗಳಿಗೂ ಅವಕಾಶ ನೀಡದಂತೆ ಮಾಡಲಾಗುತ್ತಿದೆ. ವಿಕಸಿತ ಭಾರತವನ್ನು ನಿರ್ಮಿಸುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ವೇಗವಾದ ಹೆಜ್ಜೆಗಳನ್ನು ಇರಿಸುತ್ತಿದ್ದರೆ, ರಾಜ್ಯದಲ್ಲಿ ಮಾತ್ರ ಹೆಜ್ಜೆಗಳು ಎಡವುತ್ತಿವೆ. ಇದು ಮುಂದುವರಿದರೆ ಕರ್ನಾಟಕ ಇನ್ನಷ್ಟು ಹಿಂದುಳಿಯುವುದು ಖಚಿತ.

ವಿಕಸಿತ ಭಾರತ ಎಂದರೆ ಎಲ್ಲವನ್ನೂ, ಎಲ್ಲರನ್ನೂ ಒಳಗೊಂಡು, ಒಂದಾಗಿ ಕರೆದೊಯ್ಯುವ ಪ್ರಕ್ರಿಯೆ. ಈ ಪ್ರಕ್ರಿಯೆಯನ್ನು ಬಿಜೆಪಿ ಸದಾ ಮುಂದುವರಿಸಲಿದೆ. ಇದಕ್ಕೆ ಜನರ ಬೆಂಬಲವೂ ಸದಾ ದೊರೆಯಲಿದೆ.

Read more Articles on