ಸಾರಾಂಶ
ಏಳು ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಭರ್ಜರಿ ಜಯಭೇರಿ ಬಾರಿಸಿದೆ.
ನವದೆಹಲಿ : ಏಳು ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಭರ್ಜರಿ ಜಯಭೇರಿ ಬಾರಿಸಿದೆ. 13ರ ಪೈಕಿ 10 ಸ್ಥಾನಗಳು ‘ಇಂಡಿಯಾ’ ಪಾಲಾಗಿದ್ದರೆ, ಬಿಜೆಪಿ ಕೇವಲ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಪಕ್ಷೇತರ ಅಭ್ಯರ್ಥಿಯೊಬ್ಬರು ಒಂದು ಸ್ಥಾನದಲ್ಲಿ ಗೆದ್ದಿದ್ದಾರೆ.
ಪಶ್ಚಿಮ ಬಂಗಾಳದ 4, ಹಿಮಾಚಲಪ್ರದೇಶದ 3, ಉತ್ತರಾಖಂಡದ 2, ಪಂಜಾಬ್, ಮಧ್ಯಪ್ರದೇಶ, ಬಿಹಾರ ಹಾಗೂ ತಮಿಳುನಾಡಿನ ತಲಾ 1 ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆದಿತ್ತು. ಅದರ ಫಲಿತಾಂಶ ಶನಿವಾರ ಪ್ರಕಟವಾಗಿದೆ.
ಹಿಮಾಚಲ 2 ಹಾಗೂ ಉತ್ತರಾಖಂಡ 2 ಸೇರಿ ಕಾಂಗ್ರೆಸ್ 4 ಸ್ಥಾನಗಳನ್ನು ಗೆದ್ದಿದ್ದರೆ, ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ ನಡೆದ ಎಲ್ಲ 4 ಸ್ಥಾನಗಳನ್ನೂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಬಾಚಿಕೊಂಡಿದೆ. ಹಿಮಾಚಲ 1 ಹಾಗೂ ಮಧ್ಯಪ್ರದೇಶ 1 ಸೇರಿ ಬಿಜೆಪಿಗೆ 2 ಸ್ಥಾನಗಳು ದೊರೆತಿವೆ. ತಮಿಳುನಾಡಿನಲ್ಲಿ 1 ಸ್ಥಾನ ಡಿಎಂಕೆ, ಪಂಜಾಬ್ನಲ್ಲಿ 1 ಸ್ಥಾನ ಆಪ್, ಬಿಹಾರ 1 ಸ್ಥಾನ ಪಕ್ಷೇತರ ಅಭ್ಯರ್ಥಿಗೆ ದೊರೆತಿದೆ.
ಹಿಮಾಚಲಪ್ರದೇಶದ ಡೆಹ್ರಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಪತ್ನಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕಮಲೇಶ್ ಠಾಕೂರ್ ಅವರು ಬಿಜೆಪಿ ಅಭ್ಯರ್ಥಿಯನ್ನು 9399 ಮತಗಳ ಅಂತರದಿಂದ ಮಣಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ಅಲ್ಲದೆ, 68 ಸದಸ್ಯ ಬಲದ ಹಿಮಾಚಲದಲ್ಲಿ ಪಕ್ಷಾಂತರದಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಬಲ 40ಕ್ಕೇರಿದ್ದು, ಸರ್ಕಾರ ಇನ್ನಷ್ಟು ಬಲವಾಗಿದೆ.
ಉತ್ತರಾಖಂಡದ ಪವಿತ್ರ ಕ್ಷೇತ್ರ ಬದರೀನಾಥ ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸೋಲಿಸಿದ್ದು ಗಮನಾರ್ಹ.
ಲೋಕಸಭೆ ಟ್ರೆಂಡ್ ಮುಂದರುವರಿಕೆ, ಬಿಜೆಪಿಗೆ ಪಾಠ: ಕಾಂಗ್ರೆಸ್ ಹರ್ಷ
ನಬದೆಹಲಿ: ಉಪಚುನಾವಣೆಯಲ್ಲಿ ಇಂಡಿಯಾ ಕೂಟ ಬಗ್ಗೆ ಕಾಂಗ್ರೆಸ್ ಅತೀವ ಹರ್ಷ ವ್ಯಕ್ತಪಡಿಸಿದೆ. ‘ಲೋಕಸಭೆ ಚುನಾವಣೆಯಲ್ಲಿ ಆರಂಭವಾದ ಗೆಲುವಿನ ಟ್ರೆಂಡ್ ಮುಂದುವರಿದಿದೆ. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಸೋಲು ಅನುಭವಿಸಲಿದೆ’ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಜೈರಾಂ ರಮೇಶ್ ಹಾಗೂ ಕೆ.ಸಿ. ವೇಣುಗೋಪಾಲ್ ಪ್ರತಿಕ್ರಿಯಿಸಿ, ‘ಆಪರೇಶನ್ ಕಮಲದಂಥ ಪಕ್ಷಾಂತರ ದುಸ್ಸಾಹಸಗಳಿಗೆ ಜನರು ಪಾಠ ಕಲಿಸಿದ್ದಾರೆ’ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾಎ.