ಸಾರಾಂಶ
ಭುವನೇಶ್ವರ: ‘ದಕ್ಷಿಣ ಭಾರತದಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಲಿದೆ. ಜೊತೆಗೆ ಈ ಬಾರಿಯೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಜೊತೆಗೆ ತನ್ನ ಮಿತ್ರಪಕ್ಷಗಳ ಗಳಿಕೆಯನ್ನೂ ಹೆಚ್ಚಿಸಿಕೊಳ್ಳಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಿಟಿಐಗೆ ಸಂದರ್ಶನ ನೀಡಿದ ಮೋದಿ ‘ದಕ್ಷಿಣ ಭಾರತದಲ್ಲಿ ಬಿಜೆಪಿ ದುರ್ಬಲವಾಗಿದೆ ಎಂಬ ಪ್ರತಿಪಕ್ಷಗಳ ಆರೋಪ ಕೇವಲ ಭ್ರಮೆಯಾಗಿದೆ. ಅಲ್ಲಿನ ಜನರ ಮನದಾಳಕ್ಕೆ ನಾವು ಇಳಿದಿದ್ದು, ಕಳೆದ ಬಾರಿಯೂ ನಾವು (ಎನ್ಡಿಎ) ದಕ್ಷಿಣ ಭಾರತದಲ್ಲಿ 29 ಸೀಟು ಗೆದ್ದಿದ್ದೆವು. ಈ ಬಾರಿಯೂ ತನ್ನ ಸೀಟುಗಳಿಕೆ, ಮತಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ಮಿತ್ರಪಕ್ಷಗಳ ಗಳಿಕೆಯನ್ನೂ ಹೆಚ್ಚಿಸಿಕೊಂಡು ಬಿಜೆಪಿಯು ದಕ್ಷಿಣ ಭಾರತದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ’ ಎಂದು ತಿಳಿಸಿದರು.
ಎನ್ಡಿಎ 400 ದಾಟಲಿದೆ:
ಇದೇ ವೇಳೆ ಸಮಸ್ತ ಭಾರತದ ಚಿತ್ರಣ ನೀಡುತ್ತಾ, ‘ಭಾರತದಾದ್ಯಂತ ಜನರು ಎನ್ಡಿಎ ಮೈತ್ರಿಕೂಟಕ್ಕೆ ಭಾರೀ ಬೆಂಬಲ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜೂನ್ 4 ರಂದು ಎನ್ಡಿಎ 400ಕ್ಕೂ ಅಧಿಕ ಸಿಟುಗಳನ್ನು ರಚಿಸಿ ಮೋದಿ ಸರ್ಕಾರ ರಚನೆಯಾಗಲಿದೆ’ ಎಂದು ತಿಳಿಸಿದರು.
ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ತೆಲಂಗಾಣದಲ್ಲಿ ಒಟ್ಟು 129 ಸೀಟುಗಳಿದ್ದು, 2019ರಲ್ಲಿ ಬಿಜೆಪಿ 28 ಸ್ಥಾನಗಳಲ್ಲಿ ಜಯ ಕಂಡಿತ್ತು.