ಸಾರಾಂಶ
ನವದೆಹಲಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲೆಬಾಗಿ ನಮಿಸಿದ್ದಕ್ಕೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ಷೇಪಿಸಿದ್ದಾರೆ. ಇದು ಸ್ಪೀಕರ್ ಪೀಠಕ್ಕೆ ಭೂಷಣಲ್ಲ ಎಂದಿದ್ದಾರೆ.
ಸೋಮವಾರ ಸದನದಲ್ಲಿ ಮಾತನಾಡಿದ ರಾಹುಲ್, ‘ನೀವು ನನ್ನನ್ನು ಭೇಟಿಯಾಗಿ ಕೈಕುಲುಕಿದಾಗ ನಾನು ಗಮನಿಸಿದ್ದೇನೆ, ನೀವು ನೇರವಾಗಿ ನಿಂತಿದ್ದಿರಿ. ನೀವು ಪ್ರಧಾನಿಯನ್ನು ಭೇಟಿಯಾದಾಗ ತಲೆಬಾಗಿ ನಮಸ್ಕರಿಸಿದ್ದೀರಿ. ಇದು ಸ್ಪೀಕರ್ ಪೀಠದ ಗೌರವಕ್ಕೆ ತಕ್ಕುದಲ್ಲ’ ಎಂದರು. ಇದಕ್ಕೆ ಗೃಹ ಸಚಿವ ಅಮಿತ್ ಶಾ ಆಕ್ಷೇಪ ವ್ಯಕ್ತಪಡಿಸಿದರು. ಆಗ ಸ್ಪೀಕರ್ ಉತ್ತರಿಸಿ, ‘ಸಂಸ್ಕಾರವು ನನಗೆ ಹಿರಿಯರನ್ನು ಗೌರವಿಸಲು ಮತ್ತು ನಮಸ್ಕರಿಸುವುದನ್ನು ಕಲಿಸುತ್ತದೆ ಮತ್ತು ನನಗಿಂತ ಕಿರಿಯರನ್ನು ಸಮಾನವಾಗಿ ಪರಿಗಣಿಸುತ್ತದೆ’ ಎಂದು ಸ್ಪಷ್ಟಪಡಿಸಿದರು.
ದೇವರೊಂದಿಗೆ ಮೋದಿ ನೇರ ಸಂಪರ್ಕ: ರಾಹುಲ್ ವ್ಯಂಗ್ಯ
ನವದೆಹಲಿ: ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ‘ನನ್ನನ್ನು ದೇವರೇ ಇಲ್ಲಿಗೆ ಕಳಿಸಿದ್ದಾನೆ ಎಂದು ಭಾಸ ಆಗುತ್ತಿದೆ’ ಎಂದು ನೀಡಿದ್ದ ಹೇಳಿಕೆಯ ಬಗ್ಗೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಚಾಟಿ ಬೀಸಿದ್ದಾರೆ.‘ಪರಮಾತ್ಮ ಮೋದಿ ಜಿ ಆತ್ಮದೊಂದಿಗೆ ನೇರವಾಗಿ ಮಾತನಾಡುತ್ತಾನೆ. ಮೋದಿಗೆ ದೇವರೊಂದಿಗೆ ನೇರ ಸಂಪರ್ಕವಿದೆ. ನಾವೆಲ್ಲ ಜೈವಿಕವಾಗಿ ಹುಟ್ಟಿದ್ದೇವೆ. ಆದರೆ ಮೋದಿ ಅದ್ವಿತೀಯ. ಹಲವಾರು ಸಂದೇಶಗಳು ಪ್ರಧಾನಿ ಮೋದಿಯವರಿಗೆ ದೇವರಿಂದ ರವಾನೆಯಾಗಿದೆ. ಮುಂಬೈ ವಿಮಾನ ನಿಲ್ದಾಣವನ್ನು ಅದಾನಿಗೆ ನೀಡುವಂತೆ ದೇವರು ಹೇಳುತ್ತಾನೆ. ಆಗ ಖಾಟಾ ಖಟ್, ಖಾಟಾ ಖಟ್, ಖಾಟಾ ಖಟ್ (ಬೇಗ ಬೇಗನೇ) ಆದೇಶವಾಗುತ್ತದೆ’ ಎಂದು ರಾಹುಲ್ ಕುಹಕವಾಡಿದರು.