ಸಾರಾಂಶ
ಈ ಬಾರಿಯ 33 ರಾಷ್ಟ್ರೀಯ ವಿಜ್ಞಾನ ಪುರಸ್ಕೃತರ ಪಟ್ಟಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಖ್ಯಾತ ಜೀವರಸಾಯನಶಾಸ್ತ್ರಜ್ಞ ಗೋವಿಂದರಾಜನ್ ಪದ್ಮನಾಭನ್ ಅವರನ್ನು ಮೊದಲ ವಿಜ್ಞಾನ ರತ್ನ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ
ನವದೆಹಲಿ: ವಿಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುವ ರಾಷ್ಟ್ರೀಯ ವಿಜ್ಞಾನ ಪುರಸ್ಕಾರಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಜೊತೆಗೆ ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ ವಿಜ್ಞಾನ ರತ್ನ ಪುರಸ್ಕೃತರ ಹೆಸರನ್ನು ಪ್ರಕಟಿಸಲಾಗಿದೆ.
ಖ್ಯಾತ ಜೀವರಸಾಯನಶಾಸ್ತ್ರಜ್ಞ, ಪದ್ಮವಿಭೂಷಣ ಪುರಸ್ಕೃತ ಬೆಂಗಳೂರಿನ ಐಐಎಸ್ಸಿಯ ಗೋವಿಂದರಾಜನ್ ಪದ್ಮನಾಭನ್ ಅವರಿಗೆ ಚೊಚ್ಚಲ ವಿಜ್ಞಾನ ರತ್ನ ಪುರಸ್ಕಾರ ಪ್ರಕಟಿಸಲಾಗಿದೆ. ಜೊತೆಗೆ ಚಂದ್ರಯಾನ-3ರ ಯಶಸ್ಸಿಗೆ ಶ್ರಮಿಸಿದ ವಿಜ್ಞಾನಿಗಳು ಮತ್ತು ಅದರ ತಂಡಕ್ಕೆ ಅತ್ಯುತ್ತಮ ವಿಜ್ಞಾನ ತಂಡ ಪುರಸ್ಕಾರ ಪ್ರಕಟಿಸಲಾಗಿದೆ.
ಒಟ್ಟಾರೆ 13 ವಿಜ್ಞಾನ ಶ್ರೀ ಮತ್ತು 18 ವಿಜ್ಞಾನ ಯುವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಆ.23ರಂದು ಆಚರಿಸಲಾಗುವ ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.