ಸಾರಾಂಶ
ರಾಯ್ಪುರ: ಮದ್ಯಪ್ರಿಯರಿಗೆ ಸಂತಸದ ಸುದ್ದಿ. ಛತ್ತೀಸ್ಗಢ ಬಿಜೆಪಿ ಸರ್ಕಾರವು ‘ಮನ್ಪಸಂದ್’ ಹೆಸರಿನ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದು, ಇದರಲ್ಲಿ ಮದ್ಯದ ಲಭ್ಯತೆ, ಬ್ರಾಂಡ್ಗಳು ಮತ್ತು ಬೆಲೆಗಳ ಮಾಹಿತಿ ಒದಗಿಸಲಾಗುತ್ತದೆ.
ಯಾವ ಅಂಗಡಿಗಳಲ್ಲಿ ಯಾವ ಬ್ರಾಂಡ್ ಮದ್ಯ ಲಭ್ಯ ಇದೆ ಎಂಬುದನ್ನೂ ಇದರಲ್ಲಿ ತಿಳಿಯಬಹುದಾಗಿದೆ.ಇದೇ ವೇಳೆ ತಮ್ಮ ಫೇವರಿಟ್ ಬ್ರಾಂಡ್ ಲಭ್ಯ ಇಲ್ಲದೇ ಹೋದರೆ ಆ್ಯಪ್ ಮೂಲಕವೇ ಅದನ್ನು ಗ್ರಾಹಕರು ತಿಳಿಸಿ, ಆ ಉತ್ಪನ್ನ ಲಭ್ಯ ಆಗುವಂತೆ ನೋಡಿಕೊಳ್ಳಬಹುದಾಗಿದೆ. ಇದರಲ್ಲಿ ದೂರುಗಳನ್ನು ಸಲ್ಲಿಸಲೂ ಅವಕಾಶ ನೀಡಲಾಗಿದೆ.
ಆದರೆ ಈ ಕ್ರಮವು ಕಾಂಗ್ರೆಸ್ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ‘ಆಡಳಿತಾರೂಢ ಬಿಜೆಪಿ ಮದ್ಯ ಸೇವನೆಯನ್ನು ಉತ್ತೇಜಿಸುತ್ತಿದೆ’ ಎಂದು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಆರೋಪಿಸಿದ್ದು, ರಾಜ್ಯ ಬಿಜೆಪಿ ಹಿರಿಯ ನಾಯಕ ಅಜಯ್ ಚಂದ್ರಕರ್ ಅವರದ್ದು ಎನ್ನಲಾದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಚಂದ್ರಕರ್ ಅವರು, ‘ನಕಲಿ ಮದ್ಯದಿಂದ ಜನರು ಬಚಾವಾಗಲು ಈ ಆ್ಯಪ್ ನೆರವಾಗಲಿದೆ. ಮದ್ಯ ನಿಷೇಧವು ಎಂದಿಗೂ ಬಿಜೆಪಿಯ ವಿಷಯವಲ್ಲ’ ಎಂದಿದ್ದಾರೆ.‘ಆದರೆ ಇದು ತಿರುಚಿದ ವಿಡಿಯೋ’ ಎಂದು ಚಂದ್ರಕರ್ ಸ್ಪಷ್ಟಪಡಿಸಿದ್ದಾರೆ.