ಸಾರಾಂಶ
ಹೋಶಂಗಾಬಾದ್ (ಮ.ಪ್ರ.): ದಲಿತರು-ದಮನಿತರಿಗೆ ಸಂವಿಧಾನದ ಮೂಲಕ ಸಮಾನ ಅವಕಾಶ ಕಲ್ಪಿಸಿಕೊಟ್ಟ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸದಾ ತುಳಿಯಲು ಪ್ರಯತ್ನಿಸಿದ್ದರೆ, ಆದಿವಾಸಿಗಳಿಗೆ ಸದಾ ಗೌರವ ನೀಡುವ ಮೂಲಕ ಬಿಜೆಪಿ ಅಂಬೇಡ್ಕರ್ ಅವರ ಆಶಯಗಳನ್ನು ಗೌರವಿಸುವ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಾ, ‘ಅಂಬೇಡ್ಕರ್ ಅವರ ಜನ್ಮದಿನದ ಶುಭಸಂದರ್ಭದಲ್ಲಿ ನಾವು ಅವರನ್ನು ನೆನೆಯಬೇಕಿದೆ. ಅವರನ್ನು ಸದಾ ಗೌರವಿಸುವ ಕೆಲಸವನ್ನು ಬಿಜೆಪಿ ಮಾಡುತ್ತದೆ. ಹೀಗಾಗಿ ಇಂದು ಆದಿವಾಸಿ ಮಹಿಳೆ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದಾರೆ. ಜೊತೆಗೆ ಹಿಂದುಳಿದ ವರ್ಗದ ನಾಯಕ ಮೂರನೇ ಬಾರಿಗೆ ಪ್ರಧಾನಿಯಾಗಲು ಸಾಧ್ಯವಾಗುತ್ತಿದೆ. ಆದರೆ ಕಾಂಗ್ರೆಸ್ ಪಕ್ಷವು ಸದಾಕಾಲ ಅಂಬೇಡ್ಕರ್ ಅವರನ್ನು ತುಳಿಯುವ ಕೆಲಸ ಮಾಡಿಕೊಂಡು ಬರುತ್ತಿದೆ’ ಎಂಬುದಾಗಿ ಟೀಕಿಸಿದರು.
ಇದೇ ವೇಳೆ ಹಿರಿಯ ಆದಿವಾಸಿ ನಾಯಕ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮವರ್ಷಾಚರಣೆಯ ಪ್ರಯುಕ್ತ 2025ನ್ನು ಕೇಂದ್ರ ಸರ್ಕಾರದಿಂದ ಜನಜಾತೀಯ ಗೌರವ್ ದಿವಸ್ ಎಂದು ಅಚರಿಸುವುದಾಗಿ ಘೋಷಿಸಿದರು.