ಸಾರಾಂಶ
ನವದೆಹಲಿ: ಮುಂಗಾರು ಅಧಿವೇಶನದ ಮೊದಲ ದಿನ ಅಚಾನಕ್ಕಾಗಿ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದ ಜಗದೀಪ್ ಧನಕರ್ ಅವರು ಈಗ ಟೆನ್ನಿಸ್ ಆಡಿಕೊಂಡು, ಯೋಗ ಮಾಡಿಕೊಂಡು ಪರಿವಾರದೊಂದಿಗೆ ಸಮಯ ಕಳೆಯುತ್ತ ಹಾಯಾಗಿದ್ದಾರೆ ಎಂದು ವರದಿಯಾಗಿದೆ.
ಧನಕರ್ ಅವರ ದಿನಚರಿಯೊಂದಿಗೆ ಚಿರಪರಿಚಿರಾಗಿರುವವರು ಈ ಬಗ್ಗೆ ಮಾಹಿತಿ ನೀಡಿದ್ದು, ‘ಅವರು ದಿನನಿತ್ಯ ಯೋಗ, ತಮ್ಮ ಸ್ನೇಹಿತರು, ಉಪರಾಷ್ಟ್ರಪತಿ ನಿವಾಸದ ಸಿಬ್ಬಂದಿ ಜತೆ ಟೆನ್ನಿಸ್ ಆಟದಲ್ಲಿ ತೊಡಗಿರುತ್ತಾರೆ. ಮುಂಚೆಯೂ ಪ್ರವಾಸದಿಂದ ಮರಳಿದ ಬಳಿಕ ಟಿಟಿ ಆಡುತ್ತಿದ್ದರು’ ಎಂದು ತಿಳಿಸಿದ್ದಾರೆ.
ಅನಾರೋಗ್ಯದ ಕಾರಣ ನೀಡಿ ಧನಕರ್ ಅವರು ಜು.21ರಂದು ಉಪರಾಷ್ಟ್ರಪತಿ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದರು. ಅವರ ಈ ನಡೆ ಹಲವಾರು ಸಂಶಯಗಳು, ಗೊಂದಲಗಳಿಗೆ ಎಡೆಮಾಡಿತ್ತು. ಬಿಜೆಪಿಗೆ ತಕ್ಕಂತೆ ವರ್ತಿಸುತ್ತಿರಲಿಲ್ಲವಾದ್ದರಿಂದ ಅವರನ್ನು ತೆಗೆದುಹಾಕಲಾಯಿತು ಎಂಬ ವಿಶ್ಲೇಷಣೆಗಳೂ ಕೇಳಿಬಂದಿದ್ದವು. ಇತ್ತೀಚೆಗೆ ಲೋಕಸಭೆ ವಿಪಕ್ಷ ರಾಹುಲ್ ಗಾಂಧಿ ಕೂಡ, ‘ರಾಜ್ಯಸಭೆಯಲ್ಲಿ ಸದಾ ಗದ್ದಲ ಎಬ್ಬಿಸುತ್ತಿದ್ದವರು ಇದ್ದಕ್ಕಿದ್ದಂತೆ ಶಾಂತವಾಗಿಬಿಟ್ಟಿದ್ದಾರೆ. ಅವರ ನಿರ್ಗಮನಕ್ಕೆ ಕಾರಣವೇನು ಮತ್ತು ಎಲ್ಲಿ ಅಡಗಿದ್ದಾರೆ?’ ಎಂದು ಪ್ರಶ್ನಿಸಿದ್ದರು. ಅದರ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ.