ಸಾರಾಂಶ
ನವದೆಹಲಿ: ಅನರ್ಹರ ಬಿಪಿಎಲ್ ಕಾರ್ಡ್ ರದ್ದುಪಡಿಸುವ ವಿಷಯ ಕರ್ನಾಟಕದಲ್ಲಿ ಭಾರೀ ಗದ್ದಲ ಸೃಷ್ಟಿಸಿರುವ ಹೊತ್ತಿನಲ್ಲೇ, ರೇಷನ್ ಕಾರ್ಡ್ಗಳ ಡಿಜಿಟಲೀಕರಣದ ಮೂಲಕ ಪಡಿತರ ವ್ಯವಸ್ಥೆಯಿಂದ 5.8 ಕೋಟಿ ಅಕ್ರಮ ಪಡಿತರ ಚೀಟಿ ರದ್ದುಪಡಿಸಲಾಗಿದೆ ಕೇಂದ್ರ ಸರ್ಕಾರ ಹೇಳಿದೆ.
ಜೊತೆಗೆ ಇಂಥ ಕ್ರಮ, ಜಾಗತಿಕ ಆಹಾರ ಭದ್ರತಾ ಖಾತರಿ ಯೋಜನೆ ಜಾರಿಯಲ್ಲಿ ಹೊಸದೊಂದು ಮೈಲುಗಲ್ಲಾಗಿದೆ ಎಂದು ಹೇಳಿದೆ.
ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಆಹಾರ ಸಚಿವಾಲಯ, ‘ಪಡಿತರ ವ್ಯವಸ್ಥೆಯ ಮೂಲಕ 80.6 ಕೋಟಿ ಜನರಿಗೆ ಮಾಸಿಕ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ. ಇದೀಗ ಆಧಾರ್ ಆಧರಿತ ದೃಢೀಕರಣ ಮತ್ತು ಎಲೆಕ್ಟ್ರಾನಿಕ್ ಮಾದರಿಯಲ್ಲೇ ನಿಮ್ಮ ಗ್ರಾಹಕರನ್ನು ಅರಿಯಿರಿ (ಇ-ಕೆವೈಸಿ) ಪರಿಶೀಲನೆ ಮೂಲಕ 5.8 ಕೋಟಿ ಅಕ್ರಮ ಪಡಿತರ ಚೀಟಿ ರದ್ದುಪಡಿಸಲಾಗಿದೆ. ಈ ಕೆಲಸವು ಪಡಿತರ ಸೋರಿಕೆಯನ್ನು ಗಮನಾರ್ಹ ಪ್ರಮಾಣದಲ್ಲಿ ತಡೆಯುವ ಜೊತೆಗೆ, ಅರ್ಹರಿಗೆ ಆಹಾರ ವಸ್ತುಗಳ ಲಭ್ಯತೆಯನ್ನು ಇನ್ನಷ್ಟು ಖಚಿತಪಡಿಸಿದೆ’ ಎಂದು ಹೇಳಿದೆ.
ಹಾಲಿ, ಪಡಿತರ ವಿತರಣೆ ಅಂಗಡಿಗಳಲ್ಲಿ 5.33 ಲಕ್ಷ ಇ-ಪಿಒಎಸ್ ಯಂತ್ರಗಳ ಬಳಕೆ ಮಾಡಲಾಗುತ್ತಿದೆ. ಇದರ ಮೂಲಕ ಪಡಿತರ ವಿತರಣೆ ಸಮಯದಲ್ಲೇ ಆಧಾರ್ ನಂಬರ್ ದೃಢೀಕರಣ ಮಾಡಲಾಗುತ್ತಿದೆ. ಪ್ರಸಕ್ತ ದೇಶದಲ್ಲಿನ 20.4 ಕೋಟಿ ರೇಷನ್ ಕಾರ್ಡ್ಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಈ ಪೈಕಿ ಶೇ.99.8ರಷ್ಟು ಕಾರ್ಡ್ಗಳಿಗೆ ಆಧಾರ್ ಲಿಂಕ್ ಆಗಿದ್ದರೆ, ಶೆ.98.7ರಷ್ಟು ಫಲಾನುಭವಿಗಳ ಮಾಹಿತಿಯನ್ನು ಅವರ ಬಯೋಮೆಟ್ರಿಕ್ ಮೂಲಕ ದೃಢೀಕರಿಸಲಾಗಿದೆ. ಪ್ರಸಕ್ತ ದೇಶವ್ಯಾಪಿ ಶೇ.98ರಷ್ಟು ಜನರಿಗೆ ಆಧಾರ್ ದೃಢೀಕರಣದ ಮೂಲಕವೇ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಇದು ಆಹಾರದ ಸೋರಿಕೆಯನ್ನು ತಡೆಯಲು ನೆರವಾಗಿದೆ ಎಂದು ಸರ್ಕಾರ ಹೇಳಿದೆ.
ಆಧಾರ್ ತಂತ್ರ
- 20.4 ಕೋಟಿ ರೇಷನ್ ಕಾರ್ಡ್ಗಳ ಡಿಜಿಟಲೀಕರಣ
- ಆಧಾರ್ ವೆರಿಫಿಕೇಷನ್, ಇ-ಕೆವೈಸಿ ಮೂಲಕ ಪತ್ತೆಕಾರ್ಯ
ಸದ್ದಿಲ್ಲದೇ ಪ್ರಹಾರ!
- ರೇಷನ್ ಪಡೆಯಲು ಅಂಗಡಿಗೆ ಬಂದಾಗಲೇ ಡಿಜಿಟಲ್ ತಪಾಸಣೆ ಮೂಲಕ ನಕಲಿ ಕಾರ್ಡ್ ಪತ್ತೆ
- ಆಧಾರ್ ವೆರಿಫಿಕೇಷನ್, ಇ-ಕೆವೈಸಿ ವಿಧಾನ ಬಳಸಿ ನಕಲಿ ಪಡಿತರ ಚೀಟಿ, ಬಿಪಿಎಲ್ ಕಾರ್ಡ್ ರದ್ದು
- ಪಡಿತರ ಅಂಗಡಿಗಳಲ್ಲಿ 5.33 ಲಕ್ಷ ಇ-ಪಿಒಎಸ್ ಯಂತ್ರ ಬಳಕೆ; ಇವುಗಳಲ್ಲೇ ನೈಜ ಕಾರ್ಡ್ ತಪಾಸಣೆ
- ಸದ್ಯ ದೇಶದಲ್ಲಿರುವ ಪಡಿತರ ಚೀಟಿಗಳಲ್ಲಿ ಶೇ.99.8ರಷ್ಟು ಪಡಿತರ ಚೀಟಿಗೆ ಆಧಾರ್ ಲಿಂಕ್ ಆಗಿದೆ
- ನಕಲಿ ಕಾರ್ಡ್ ರದ್ದಾದರೆ ಪಡಿತರ ಸೋರಿಕೆಗೆ ಅಂಕುಶ, ಅರ್ಹರಿಗೆ ಆಹಾರ ಧಾನ್ಯಗಳು ಲಭ್ಯ: ಕೇಂದ್ರ