ಸಾರಾಂಶ
ಶ್ರಾವಣದಲ್ಲಿ ಪವಿತ್ರ ಕಾವಾಡಿ ಯಾತ್ರೆ ಸಾಗುವ 240 ಕಿ.ಮೀ ರಸ್ತೆಯುದ್ದಕ್ಕೂ ಇರುವ ಬೀದಿ ಬದಿ ತಿಂಡಿ ವ್ಯಾಪಾರಿಗಳು ತಮ್ಮ ತಳ್ಳುವ ಗಾಡಿ/ ಅಂಗಡಿಯೆದುರು ಮಾಲೀಕರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶದ ಮುಜಫ್ಫರ್ನಗರ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಮೇರಠ್: ಶ್ರಾವಣದಲ್ಲಿ ಪವಿತ್ರ ಕಾವಾಡಿ ಯಾತ್ರೆ ಸಾಗುವ 240 ಕಿ.ಮೀ ರಸ್ತೆಯುದ್ದಕ್ಕೂ ಇರುವ ಬೀದಿ ಬದಿ ತಿಂಡಿ ವ್ಯಾಪಾರಿಗಳು ತಮ್ಮ ತಳ್ಳುವ ಗಾಡಿ/ ಅಂಗಡಿಯೆದುರು ಮಾಲೀಕರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶದ ಮುಜಫ್ಫರ್ನಗರ ಪೊಲೀಸರು ಆದೇಶ ಹೊರಡಿಸಿದ್ದಾರೆ.
‘ಯಾತ್ರೆಯ ವೇಳೆ ಕಾವಾಡಿಗಳು ರಸ್ತೆ ಬದಿಯಲ್ಲಿ ತಿಂಡಿತಿನಿಸುಗಳನ್ನು ಖರೀದಿಸುವ ಕಾರಣ ಉಂಟಾಗಬಹುದಾದ ಗೊಂದಲಗಳಿಗೆ ಆಸ್ಪದ ಕೊಡದೆ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಆದೇಶ ಹೊರಡಿಸಲಾಗಿದೆ’ ಎಂದು ಮುಜಫ್ಫರ್ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭೀಷೇಕ್ ಸಿಂಗ್ ಹೇಳಿದ್ದಾರೆ.ಆದರೆ, ಇದು ಮುಸ್ಲಿಂ ವ್ಯಾಪಾರಿಗಳನ್ನು ಗುರಿಯಾಗಿಸಿ ಹೊರಡಿಸಿರುವ ಆದೇಶ. ಮುಸ್ಲಿಂ ವ್ಯಾಪಾರಿಗಳಿಂದ ಕಾವಾಡಿಗಳು ಏನೂ ಖರೀದಿಸಬಾರದು ಎಂಬ ಹುನ್ನಾರ ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಕಿಡಿಕಾರಿದ್ದಾರೆ.
ಮುಸ್ಲಿಮರು ಹಿಂದೂ ದೇವತೆಗಳ ಹೆಸರಿನಲ್ಲಿ ವ್ಯಾಪಾರ ನಡೆಸಬಾರದು ಎಂಬ ಮುಜಫ್ಫರ್ನಗರ ಶಾಸಕ ಕಪಿಲ್ ದೇವ್ ಅಗರ್ವಾಲ್ ಹೇಳಿಕೆಯ ಬೆನ್ನಲ್ಲೇ ಈ ಆದೇಶ ಹೊರಡಿಸಲಾಗಿದ್ದು, ಇದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ. ಜು22ರಿಂದ ಆ 2ರ ವರೆಗೆ ನಡೆಯುವ ಕಾವಾಡಿ ಯಾತ್ರೆಯಲ್ಲಿ ಗಂಗೆಯ ನೀರು ಸಂಗ್ರಹಿಸುವ ಸಲುವಾಗಿ ಶಿವಭಕ್ತರು ಪಾದಯಾತ್ರೆ ಕೈಗೊಳ್ಳುತ್ತಾರೆ.