ಸಾರಾಂಶ
ಚೆನ್ನೈ: ಹಿಂದೂ ಧರ್ಮದ ಕುರಿತು ತಮಿಳುನಾಡಿನ ಡಿಎಂಕೆ ಪಕ್ಷದ ಸಚಿವರ ಹೇಳಿಕೆ ನಿಲ್ಲುವಂತೆ ಕಾಣುತ್ತಿಲ್ಲ. ತಮಿಳುನಾಡಿನ ಅರಣ್ಯ ಸಚಿವ ಕೆ. ಪೊನ್ಮುಡಿ ಇದೀಗ, ಶೈವ ಮತ್ತು ವೈಷ್ಣವ ಪಂಥದ ಭಿನ್ನತೆಯನ್ನು ಲೈಂಗಿಕ ಭಂಗಿಗೆ ಹೋಲಿಸಿ ಹೊಸ ವಿವಾದ ಸೃಷ್ಟಿಸಿದ್ದಾರೆ.
ಸಚಿವರ ಈ ಹೇಳಿಕೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಜೆಪಿ ಮಾತ್ರವಲ್ಲದೆ ಸ್ವತಃ ಡಿಎಂಕೆ ಮುಖಂಡರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜತೆಗೆ ಅವರನ್ನು ಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆ.
ಹೇಳಿದ್ದೇನು?:
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ‘ವ್ಯಕ್ತಿಯೊಬ್ಬ ವೇಶ್ಯೆ ಬಳಿ ಹೋಗುತ್ತಾನೆ. ಆಗ ವೇಶ್ಯೆಯು ನಿನ್ನದು ಶೈವಪಂಥವೋ, ವೈಷ್ಣವ ಪಂಥವೋ ಎಂದು ಕೇಳುತ್ತಾಳೆ. ಆಕೆಯ ಪ್ರಶ್ನೆಯಿಂದ ವ್ಯಕ್ತಿ ಗೊಂದಲಕ್ಕೀಡಾಗುತ್ತಾನೆ. ಆಗ ವೇಶ್ಯೆಯು, ‘ಒಂದು ವೇಳೆ ನೀನು ಶೈವ (ಅಡ್ಡನಾಮ) ಪಂಥದವನಾಗಿದ್ದರೆ ಮಲಗಿಕೊಂಡ ಲೈಂಗಿಕ ಭಂಗಿಯಲ್ಲಿ ರತಿಕ್ರೀಡೆ ಆಡುತ್ತೀಯಾ ಮತ್ತು ವೈಷ್ಣವಪಂಥದ (ಉದ್ದನಾಮ) ವ್ಯಕ್ತಿ ಆಗಿದ್ದರೆ ನಿಂತಭಂಗಿಯಲ್ಲಿ ರತಿಕ್ರೀಡೆ ಆಡುತ್ತೀಯಾ’ ಎಂದು ಆಕೆ ಹೇಳುತ್ತಾಳೆ'''' ಎಂದು ಹೇಳಿದ್ದರು.
ಸಚಿವರ ಈ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂಥ ಕೀಳು ಹೇಳಿಕೆ ಖಂಡನಾರ್ಹ ಎಂದು ಡಿಎಂಕೆ ಸಂಸದೆ ಕನಿಮೋಳಿ ಅವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.